ಹನೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವು ಸವಲತ್ತುಗಳನ್ನು ನೀಡುವುದರ ಮೂಲಕ ಗ್ರಾಮಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕಿ ಲತಾ ಬಂಗೇರಾ ತಿಳಿಸಿದರು.
ತಾಲೂಕಿನ ಬಂಡಳ್ಳಿ ಗ್ರಾಮದ ಕಾಳಿಕಾಂಬಾದೇವಿ ದೇಗುಲದ ಜೀರ್ಣೋದ್ಧಾರಕ್ಕೆ ಶನಿವಾರ 1ಲಕ್ಷ ರೂ. ಪ್ರೋತ್ಸಾಹ ಧನದ ಚೆಕ್ ವಿತರಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಯಾವುದೆ ಜಾತಿ ಭೇದವಿಲ್ಲದೆ ಎಲ್ಲ ವರ್ಗದ ಜನರನ್ನು ಒಳಗೊಂಡಿದ್ದು, ಮಹಿಳೆಯರಲ್ಲಿ ಉಳಿತಾಯದ ಮನೋಭಾವನೆಯನ್ನು ಬೆಳೆಸುವುದರ ಮೂಲಕ ಅವರನ್ನು ಸಬಲೀಕರಣಗೊಳಿಸುತ್ತಿದೆ. ಜತೆಗೆ ಕೆರೆ ಹೂಳೆತ್ತುವುದು, ನಿರ್ಗತಿಕರಿಗೆ ಮನೆ ನಿರ್ಮಿಸುವುದು, ಆಹಾರ, ಬಟ್ಟೆ ಒದಗಿಸುವುದು, ಅಂಗವಿಕಲರಿಗೆ ಅಗತ್ಯ ಸಲಕರಣೆ ವಿತರಣೆ, ಮಕ್ಕಳ ವೃತ್ತಿಪರ ಕೋರ್ಸ್ಗಳಿಗೆ ಶಿಷ್ಯ ವೇತನ ನೀಡುವುದು, ಶಾಲಾ ಕೊಠಡಿ, ಶೌಚಗೃಹ, ಕುಡಿಯುವ ನೀರಿನ ಸೌಕರ್ಯ, ಬೆಂಚ್ ನೀಡುವುದು, ಸಮುದಾಯ ಭವನ ಹಾಗೂ ದೇಗುಲಗಳ ಜೀರ್ಣೋದ್ಧಾರಕ್ಕೆ ಪ್ರೋತ್ಸಾಹ ಧನ ಹಾಗೂ ಇನ್ನಿತರ ಸಾಮಾಜಿಕ ಕಾರ್ಯಗಳಿಗೆ ಸಹಕಾರ ನೀಡುತ್ತಾ ಬಂದಿದೆ. ಇದೀಗ ಕಾಳಿಕಾಂಬಾ ದೇವಿ ದೇಗುಲಕ್ಕೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಆದ್ದರಿಂದ ಯೋಜನೆ ವತಿಯಿಂದ ದೊರಕುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ತಾಲೂಕು ಯೋಜನಾಧಿಕಾರಿ ಪ್ರವೀಣ್ಕುಮಾರ್, ದೇವಸ್ಥಾನ ಸಮಿತಿ ಅಧ್ಯಕ್ಷ ಡಾ. ನಾಗಲಿಂಗಪ್ಪ, ವಲಯ ಮೇಲ್ವಿಚಾರಕ ಸುರೇಶ್, ಒಕ್ಕೂಟದ ಅಧ್ಯಕ್ಷೆ ಪಾರ್ವತಮ್ಮ, ವಿಶ್ವಕರ್ಮ ಸಂಘದ ನಿರ್ದೇಶಕ ಶ್ರೀನಿವಾಸಾಚಾರಿ, ಮುಖಂಡರಾದ ನಾಗರಾಜಾಚಾರಿ, ಪ್ರಭು, ಶಂಭುಲಿಂಗ, ನಂಜುಂಡಸ್ವಾಮಿ ಹಾಗೂ ಯೋಜನೆಯ ಸೇವಾ ಪ್ರತಿನಿಧಿಗಳು ಇದ್ದರು.