ಶಿವಮೊಗ್ಗ: ‘ನಿದ್ದೆ ಬರುತ್ತಿಲ್ಲ ಸಾರ್…’
ಮಧ್ಯರಾತ್ರಿ ತುರ್ತು ಸೇವೆ 112 ನಂಬರ್ಗೆ ಇಂಥದ್ದೊಂದು ಕರೆ ಬಂದಾಗ ಪೊಲೀಸರು ತಲೆ ಚಚ್ಚಿಕೊಳ್ಳುವುದೊಂದೇ ಬಾಕಿ. ನಿದ್ದೆ ಬಾರದಿರುವುದಕ್ಕೆ ಕಾರಣವೂ ಇದೆ. ಈ ಸಮಸ್ಯೆಗೆ ಪರಿಹಾರ ಬೇಕು ಎಂಬುದೇ ದೂರುದಾರರ ಅಳಲು.
ಗುರುವಾರ ರಾತ್ರಿ 112 ನಂಬರ್ಗೆ ಕರೆ ಮಾಡಿದ ತೀರ್ಥಹಳ್ಳಿ ತಾಲೂಕು ಮಾಳೂರಿನ ಸೈಯದ್ ಮುಬಾರಕ್ ಎಂಬಾತ, ನೆರೆಮನೆಯ ವ್ಯಕ್ತಿ ಗೊರಕೆ ಹೊಡೆಯುತ್ತಿರುವುದರಿಂದ ನನಗೆ ನಿದ್ರಾಭಂಗವಾಗುತ್ತಿದೆ. ಆತನ ಗೊರಕೆ ಸೌಂಡ್ ನಿಲ್ಲಿಸಿ ಎಂದು ಹೇಳಿದ್ದಾನೆ. 112 ಸಿಬ್ಬಂದಿ ರಾತ್ರಿ ಬೀಟ್ನಲ್ಲಿದ್ದ ಎಎಸ್ಐ ಕೃಷ್ಣಮೂರ್ತಿಗೆ ಫೋನ್ ಮೂಲಕ ವಿಷಯ ತಿಳಿಸಿದ್ದಾರೆ.
ಒಂದೇ ಕಟ್ಟಡದ ಮೂರು ಮನೆಗಳ ಪೈಕಿ ಮಧ್ಯದ ಮನೆಯ ವ್ಯಕ್ತಿ ಗೊರಕೆ ಹೊಡೆಯುತ್ತಿದ್ದಾನೆ ಎಂಬುದು ಸೈಯದ್ ಮುಬಾರಕ್ ದೂರಾಗಿತ್ತು. ಮಧ್ಯರಾತ್ರಿಯೇ ಸ್ಥಳಕ್ಕೆ ಹೋಗಿದ್ದ ಎಎಸ್ಐ ಅಲ್ಲಿನ ಪರಿಸ್ಥಿತಿ ಗಮನಿಸಿದಾಗ ಯಾವ ಗೊರಕೆ ಶಬ್ದವೂ ಕೇಳಿ ಬಂದಿಲ್ಲ. ಪಾಪ, ದೂರುದಾರನ ದುರದೃಷ್ಟ, ಎಎಸ್ಐ ಅಲ್ಲಿಗೆ ಬಂದಾಗಲೇ ಗೊರಕೆ ಶಬ್ದ ನಿಂತು ಹೋಗಿತ್ತು. ತಾಳ್ಮೆ ತೆಗೆದುಕೊಂಡ ಎಎಸ್ಐ ಬೆಳಗ್ಗೆ ಠಾಣೆಗೆ ಬನ್ನಿ ಎಂದು ಸೈಯದ್ ಮುಬಾರಕ್ಗೆ ತಿಳಿಸಿ ಅಲ್ಲಿಂದ ಹೊರಟಿದ್ದಾರೆ.
ಮರುದಿನ ಠಾಣೆಗೆ ಬಂದ ಸೈಯದ್ ಮುಬಾರಕ್ಗೆ ಕ್ಲಾಸ್ ತೆಗೆದುಕೊಂಡ ಪೊಲೀಸರು, ತುರ್ತು ಸೇವೆಯನ್ನು ದುರ್ಬಳಕೆ ಮಾಡಿಕೊಂಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಮುಂದೆ ಇದೇ ರೀತಿ ಕಿರಿಕಿರಿ ಮಾಡಿದರೆ ಜೋಕೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲಿಗೆ ಗೊರಕೆ ಪುರಾಣಕ್ಕೆ ವಿರಾಮ ಬಿದ್ದಿದೆ.
‘ಡಾ.ಬ್ರೋ’ಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಕನ್ನಡಿಗರ ಆಗ್ರಹ; ಏನಂತಾರೆ ‘ನಮಸ್ಕಾರ ದೇವರು’?
ಆಸ್ಟ್ರೇಲಿಯನ್ ಸಿನಿಮಾಗೆ ಕನ್ನಡಿಗನ ಸಂಗೀತ; ಮೊದಲ ಪ್ರಯತ್ನದಲ್ಲೇ ಶ್ರೇಷ್ಠ ಸಂಗೀತ ಪ್ರಶಸ್ತಿ