ಕಾರಟಗಿ: ಈಳಿಗನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಹಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸುವಂತೆ ಆಗ್ರಹಿಸಿ ದಸಂಸ (ಭೀಮಾವಾದ) ತಾಲೂಕು ಘಟಕ ಸೋಮವಾರ ತಹಸೀಲ್ದಾರ್ ಎಂ.ಬಸವರಾಜಗೆ ಮನವಿ ಸಲ್ಲಿಸಿತು.
ಸಿದ್ದಾಪುರ-ನಂದಿಹಳ್ಳಿ ರಸ್ತೆಯಿಂದ ಈಳಿಗನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಮಧ್ಯೆ ಬೃಹತ್ ಹಳ್ಳ ಹಾದುಹೋಗಿದ್ದು ಇದಕ್ಕೆ ಕಟ್ಟಿದ ಸೇತುವೆ ಶಿಥಿಲಗೊಂಡಿದೆ. ಹಳ್ಳದ ಸೇತುವೆ ತಡೆಗೋಡೆ ಮತ್ತು ನಿರ್ವಹಣೆ ಇಲ್ಲವಾದ್ದರಿಂದ ಜಾಲಿ ಬೆಳೆದಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಹಳ್ಳಕ್ಕೆ ಯಥೇಚ್ಛವಾಗಿ ನೀರು ಹರಿದು ಬರುತ್ತಿದೆ. ಇತ್ತೀಚೆಗೆ ಬಾಲಕನೋರ್ವ ಕಾಲುಜಾರಿ ಹಳಕ್ಕೆ ಬಿದ್ದು ಮೃತಪಟ್ಟಿದ್ದಾನೆ. ಇದಕ್ಕೂ ಮೊದಲು ಮೂರು ಜನರು ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಗ್ರಾಮಸ್ಥರು ಸೇತುವೆ ಮೇಲೆ ಓಡಾಡಲು ಭಯಭೀತರಾಗಿದ್ದಾರೆ. ಆದ್ದರಿಮದ ಕೂಡಲೇ ಹಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇಡೀ ಗ್ರಾಮಸ್ಥರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮುಖಂಡರು ಎಚ್ಚರಿಸಿದರು.
ಸಂಘದ ಪದಾಧಿಕಾರಿಗಳಾದ ಸುಂಕಪ್ಪ ಭೋವಿ, ದುರುಗೇಶ ಅಳ್ಳಳ್ಳಿ, ಸುರೇಶ ಛಲವಾದಿ, ಸುರೇಶ ಗಾಂಧಿನಗರ, ಶಿವರಾಜ ಸಂಗಾಪುರ, ಭೋಜಪ್ಪ ಮಾಳೇಮನಿ, ಯಮನೂರ ಭಟ್, ಶಂಕರ್ ಗಿಣಿಮೋತಿ ಇತರರಿದ್ದರು.