ಗುಂಡ್ಲುಪೇಟೆ: ‘ಆನೆ ನಡೆದದ್ದೇ ದಾರಿ’ ಎಂಬ ಮಾತು ಅಕ್ಷರಶಃ ಸತ್ಯ. ಯಾಕಂದ್ರೆ ಅರಣ್ಯದಿಂದ ಪ್ರಾಣಿಗಳು ಹೊರಬರದಂತೆ ಕಾಡಂಚಿನಲ್ಲಿ ಅಳವಡಿಸಿರುವ ರೈಲ್ವೆ ಕಂಬಿಗಳ ಬ್ಯಾರಿಕೇಡ್ ಅನ್ನು ಒಂಟಿ ಸಲಗವೊಂದು ಕಿತ್ತೆಸೆಯುವ ಮೂಲಕ ಆನೆ ನಡೆದದ್ದೇ ದಾರಿ ಎಂಬುದನ್ನು ನಿರೂಪಿಸಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿ ಎನ್. ಬೇಗೂರು ವಲಯದ ಕಾಟವಾಳು ಗ್ರಾಮದ ಬಳಿ ಒಂಟಿ ಸಲಗ ಕಬ್ಬಿಣದ ರೈಲ್ವೆ ಬ್ಯಾರಿಕೇಡನ್ನು ಆಕ್ರೋಶದಿಂದ ಕಿತ್ತೆಸೆದಿದೆ. ಈ ಬ್ಯಾರಿಕೇಡ್ ಮುರಿಯಲು ಕಾಡಾನೆ ತನ್ನ ದಂತಗಳನ್ನೇ ಅಸ್ತ್ರವಾಗಿಸಿಕೊಂಡ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿರಿ video/ ಕಾವೇರಿ ಮಾತೆಗೆ ಕೈ ಮುಗಿದು ನದಿಗೆ ಹಾರಿದ ಮಹಿಳೆ! ಆತ್ಮಹತ್ಯೆಗೆ ಯತ್ನಿಸಿದ ದೃಶ್ಯ ವೈರಲ್
ಕಾಟವಾಳು ಕಳಸೂರು ಸಮೀಪ ಅರಣ್ಯ ಇಲಾಖೆಯು ರೈಲು ಕಂಬಿ ಅಳವಡಿಸುವ ಕಾಮಗಾರಿ ನಡೆಸುತ್ತಿದೆ. ಈ ಮಾರ್ಗದಲ್ಲಿ ಸಾಗುತ್ತಿದ್ದ ಒಂಟಿ ಸಲಗವು ತನ್ನ ದಾರಿಗೆ ಅಡ್ಡವಾದ ಕಂಬಿಯನ್ನು ಆಕ್ರೋಶದಿಂದ ಗುದ್ದಿದೆ. ಇದರಿಂದ ಕಾಂಕ್ರೀಟ್ ಹಾಕಿ ಅಳವಡಿಸಿದ್ದ ಕಂಬಗಳು ನೆಲಕ್ಕುರುಳಿವೆ. ಆನೆಯ ಆರ್ಭಟಕ್ಕೆ ಅರಣ್ಯ ಸಿಬ್ಬಂದಿಯೇ ಬೆಚ್ಚಿಬಿದ್ದಿರುವುದು ದೃಶ್ಯದಲ್ಲಿ ಕಂಡುಬಂದಿದೆ.
ಕಳೆದ ತಿಂಗಳು ಹೆಡೆಯಾಲ ಉಪವಿಭಾಗದ ಮೊಳೆಯೂರು ವಲಯದ ವಸ್ತಿಹಳ್ಳದಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ರೈಲು ಕಂಬಿಯ ಕೆಳಗೆ ಆನೆ ನುಸುಳಲು ಹೋಗಿ ಸಿಲುಕಿಕೊಂಡಿತ್ತು. ಅರಣ್ಯ ಸಿಬ್ಬಂದಿ ಕಂಬಿಗೆ ಅಳವಡಿಸಿದ್ದ ಬೋಲ್ಟ್ ಬಿಚ್ಚಿ ಆನೆ ಹೊರಬರುವಂತೆ ಮಾಡಿದ್ದರು. ಓಂಕಾರ್ ವಲಯದಲ್ಲಿ ರೈತರ ಎದುರೇ ಆನೆಯೊಂದು ಕಂಬಿಯನ್ನು ಹತ್ತಿ ದಾಟುತ್ತಿರುವ ವಿಡಿಯೋ ಸಹ ವೈರಲ್ ಆಗಿತ್ತು.
ಕಳಸೂರು ಸಮೀಪ ರೈಲು ಕಂಬಿ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಕಾಂಕ್ರೀಟ್ ಕಂಬಗಳು ಇನ್ನೂ ಗಟ್ಟಿಯಾಗುವ ಮೊದಲೇ ಆನೆ ದಾಳಿಯಿಂದ ನೆಲಕ್ಕುರುಳಿವೆ. ಯಾವುದೇ ಅನಾಹುತವಾಗಿಲ್ಲ ಎಂದು ಎನ್.ಬೇಗೂರು ವಲಯ ಆರ್ಎಫ್ಒ ಚೇತನ್ ತಿಳಿಸಿದ್ದಾರೆ.
ಕಾಡಾನೆ V/s ರೈಲ್ವೆ ಬ್ಯಾರಿಕೇಡ್ !
ಕಾಡಾನೆ V/s ರೈಲ್ವೆ ಬ್ಯಾರಿಕೇಡ್ !ರೈಲ್ವೆ ಕಂಬಿಗಳ ಬ್ಯಾರಿಕೇಡ್ ಅನ್ನು ಕಿತ್ತೆಸೆಯಲು ಕಾಡಾನೆ ಹೇಗೆಲ್ಲ ಸರ್ಕಸ್ ಮಾಡ್ತಿದೆ ನೋಡಿ. ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿರಕ್ಷಿತಾರಣ್ಯದ ಹೆಡಿಯಾಲ ವಲಯದ ಕಾಡಂಚಿನಲ್ಲಿ ಪ್ರಾಣಿಗಳು ಹೊರಬಾರದಂತೆ ರೈಲ್ವೆ ಕಂಬಿಗಳ ಬ್ಯಾರಿಕೇಡ್ ಅಳವಡಿಸಲಾಗಿದೆ. ಈ ಬ್ಯಾರಿಕೇಡ್ ಮುರಿಯಲು ಕಾಡಾನೆ ತನ್ನ ದಂತಗಳನ್ನೇ ಅಸ್ತ್ರವಾಗಿಸಿಕೊಂಡ ದೃಶ್ಯ ವೈರಲ್ ಆಗಿದೆ. #RailwayBarricade #Bandipura #Elephant
Posted by Vijayavani on Tuesday, July 21, 2020