* ಅಂಬಾಭವಾನಿ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ
ಹೊಸಪೇಟೆ: ನಗರದ ಬಳ್ಳಾರಿ ರಸ್ತೆಯ ಅಂಬಾಭವಾನಿ ದೇವಸ್ಥಾನ ಆವರಣದಲ್ಲಿ ಶನಿವಾರ ಆಯೋಜಿಸಿರುವ ಹಕ್ಕು ಪತ್ರ ವಿತರಣಾ ಸಮಾರಂಭಕ್ಕೆ ವಿದ್ಯುತ್ ಸಮಸ್ಯೆ ಎದಿರಾಗಿದ್ದರಿಂದ ಸಚಿವ ಆನಂದ ಸಿಂಗ್ ಸೇರಿದಂತೆ ಜಿಲ್ಲಾಡಳಿತ ಪೇಚಿಗೆ ಸಿಲುಕಿತು.
ಬೆಳಗ್ಗೆ ೧೧.೧೦ ರ ಸುಮಾರಿಗೆ ದೇವಸ್ಥಾನಕ್ಕೆ ಆಗಮಿಸಿದ ಸಚಿವ ಆನಂದ ಸಿಂಗ್ ಅವರು ನಗರಸಭೆ ಅಧ್ಯಕ್ಷೆ ಸುಂಕಮ್ಮ, ಜಿಲ್ಲಾಧಿಕಾರಿ ಟಿ.ವೆಂಕಟೇಶ, ಎಸ್ಪಿ ಶ್ರೀಹರಿ ಬಾಬು ಅವರೊಂದಿಗೆ ತಾಯಿ ಅಂಬಾಭವಾನಿಗೆ ಪೂಜೆ ಸಲ್ಲಿಸಿದರು.
ಬಳಿಕ ಕಾರ್ಯಕ್ರಮದ ವೇದಿಕೆ ಬರುತ್ತಿದ್ದಂತೆ ಕರೆಂಟ್ ಕಡಿತಗೊಂಡಿತು.
ಸುಮಾರು ೨೫ ನಿಮಿಷ ಕಾದು ಕುಳಿತರೂ ವಿದ್ಯುತ್ ಪೂರೈಕೆ ಆಗಲಿಲ್ಲ. ಈ ನಡುವೆ ಸಚಿವರ ಆಪ್ತರು, ಅಧಿಕಾರಿಗಳು ಜೆಸ್ಕಾಂವಅಧಿಕಾರಿಗಳಿಗೆ ಕರೆ ಮಾಡಿದರೂ ಫಲಿಸಲಿಲ್ಲ. ದೇವಸ್ಥಾನದ ಸಮುದಾಯ ಭವನದ ಜನರೇಟರ್ ಚಾಲೂ ಮಾಡುವ ಪ್ರಯತ್ನವೂ ಕೈಗೂಡಲಿಲ್ಲ. ಹೀಗಾಗಿ ಸ್ವತಃ ಜನರೇಟರ್ ನತ್ತ ದಾವಿಸಿದ ಸಚಿವ ಆನಂದಸಿಂಗ್ ಸ್ಥಳೀಯ ಮುಖಂಡರ ವಿರುದ್ಧ ಕಣ್ಣು ಕಂಪಾಗಿಸಿ, ಕಾರ್ಯಕ್ರಮಕ್ಕೆ ಬೇಕಾದ ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು. ಜನರು ಕೆಲಸವಿಲ್ಲದೇ ಬಂದಿರುವುದಿಲ್ಲ ಎಂದು ಹರಿಹಾಯ್ದರು.
ವಿದ್ಯುತ್ ಕಡಿತದ ಮಧ್ಯೆಯೇ ಕಾರ್ಯಕ್ರಮ ಆರಂಭಿಸಲಾಯಿತು. ಉದ್ಘಾಟನೆ ಬಳಿಕ ಸಚಿವ ಆನಂದ ಸಿಂಗ್ ಭಾಷಣ ಆರಂಭಿಸುವ ವೇಳೆಗೆ ವಿದ್ಯುತ್ ಪೂರೈಕೆಯಾಯಿತು.
ಇಲ್ಲಿನ ಜೆ.ಪಿಭವನ, ಸಿರಸಿನಕಲ್ಲು, ಸಂಕ್ಲಾಪುರ ತಾಂಡ ಏರಿಯಾ ಭಾಗದ ವಸತಿ ರಹಿತರಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದಕ್ಕಾಗಿ ಬೆಳಗ್ಗೆ ೯.೩೦ ರಿಂದಲೇ ನೂರಾರು ಫಲಾನುಭವಿಗಳು ಕಾದು ಕುಂತಿದ್ದರು.