ಸಿದ್ದಾಪುರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮದ ವಿವಿಧ ವಾರ್ಡ್ಗಳ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಗುರುವಾರ ಅಂಚೆ ಮತದಾನ ಮಾಡಿದರು.
ಇದನ್ನೂ ಓದಿ: ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗ ದೂರು ದಾಖಲು!
ಜಿಲ್ಲಾಧಿಕಾರಿ ನಿಯೋಜಿತ ಚುನಾವಣೆ ಅಧಿಕಾರಿಗಳ ತಂಡ ಮನೆ ಮನೆ ಮತದಾನ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಸಿತು. ಮೇ.7ರಂದು ನಡೆಯುವ ಚುನಾವಣೆಗೆ ಮತದಾನ ಮಾಡಲು ಚುನಾವಣಾ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡಿದ್ದವರು ಮನೆಯಲ್ಲೇ ಮತದಾನ ಮಾಡಿ ಖುಷಿಪಟ್ಟರು. ಹಿರಿಯ ನಾಗರಿಕರ ಕುಟುಂಬಸ್ಥರು ಕೂಡ ಭಾರತ ಚುನಾವಣೆ ಆಯೋಗದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷ್ಣಾಪುರದ ಅಂಗವಿಕಲ ಚಿಲಕೂರಿ ಶ್ರೀನಿವಾಸ ಮತ ಚಲಾಯಿಸಿ ಮಾತನಾಡಿ, ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಿ. ಮತದಾನದಿಂದ ಯಾರು ದೂರ ಉಳಿಯಬಾರದು. ಚುನಾವಣೆ ಆಯೋಗವು ನಮ್ಮಂತವರಿಗೆ ಮನೆಯಿಂದಲೇ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಿದ್ದು ನಿಜಕ್ಕೂ ಹೆಮ್ಮೆಯ ವಿಷಯ ಎಂದರು.
ಸಿದ್ದಾಪುರದಲ್ಲಿ ಒಂಬತ್ತು ಜನ ಅಂಗವಿಕಲರು, ನಾಲ್ವರು ಹಿರಿಯ ನಾಗರಿಕರು ಸೇರಿ ಒಟ್ಟು 13ಜನ ಅಂಚೆ ಮತದಾನ ಮಾಡಿದರು.
ತಹಸೀಲ್ದಾರ್ ಎಂ.ಕುಮಾರಸ್ವಾಮಿ, ಕಂದಾಯ ನಿರೀಕ್ಷರಾದ ಶರಣಪ್ಪ, ಸೆಕ್ಟರ್ ಅಧಿಕಾರಿಗಳಾದ ಮಲ್ಲಿಕಾರ್ಜುನ, ಕಿಶೋರ್, ನಾಗರಾಜ್, ಗ್ರಾಮ ಲೆಕ್ಕಾಧಿಕಾರಿ ಮರುಳಸಿದ್ದಪ್ಪ ಇತರರಿದ್ದರು.