ಮುಂಬೈ: ಮಹಾರಾಷ್ಟ್ರ ರಾಜಕಾರಣ ದಿನೇದಿನೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಬಿಜೆಪಿಯೊಳಗೂ ಆಂತರಿಕ ಸಂಘರ್ಷ ಶುರುವಾಗಿದೆ. ಕೆಲವು ದಿನಗಳಿಂದಲೇ ವದಂತಿ ರೂಪದಲ್ಲಿದ್ದ ಏಕನಾಥ ಖಡ್ಸೆ ಮತ್ತು ಮಾಜಿ ಸಿಎಂ ದೇವೇಂದ್ರ ಫಡ್ನಾವೀಸ್ ಅವರ ನಡುವಿನ ಶೀತಲ ಸಮರಕ್ಕೆ ಇಂದು ತೆರೆ ಬಿದ್ದಿದೆ.
ಖಡ್ಸೆ ಅಸಮಾಧಾನ ಯಾವಾಗದ್ದು?
ದೇವೇಂದ್ರ ಫಡ್ನಾವಿಸ್ ಮುಖ್ಯಮಂತ್ರಿಯಾಗಿದ್ದಾಗ 2016ರಲ್ಲಿ ಭ್ರಷ್ಟಾಚಾರದ ಆರೋಪ ಎದುರಾದಾಗ ಖಡ್ಸೆ ಅವರನ್ನು ಸಚಿವ ಸ್ಥಾನದಿಂದ ಕೆಳಕ್ಕೆ ಇಳಿಯುವಂತೆ ಮಾಡಿದ್ದರು. ಈ ಅಸಮಾಧಾನ ಹಾಗೆಯೇ ಬೆಂಕಿ ಮುಚ್ಚಿದ ಕೆಂಡದಂತಿದ್ದು, ಪದೇಪದೆ ವ್ಯಕ್ತವಾಗಿ ಈಗ ಸ್ಫೋಟವಾಗಿದೆ ಎಂದು ಖಡ್ಸೆ ಆಪ್ತರು ಹೇಳಿಕೊಂಡಿದ್ದಾರೆ.
ಇಂದು ಬಿಜೆಪಿಯಿಂದ ಹೊರಬಿದ್ದಿರುವುದಾಗಿ ಏಕನಾಥ ಖಡ್ಸೆ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಅಲ್ಲದೆ, 23ರಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ ) ಸೇರ್ಪಡೆಯಾಗುತ್ತಿದ್ದೇನೆ. ತನಗೆ ಫಡ್ನಾವಿಸ್ ಜತೆಗೆ ಭಿನ್ನಮತವಿದೆ. ಆದರೆ ಕೇಂದ್ರ ನಾಯಕತ್ವದ ಬಗ್ಗೆ ಯಾವುದೇ ತಕರಾರು ಇಲ್ಲ ಎಂದು ಖಡ್ಸೆ ಇದೇ ವೇಳೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಬಲವಂತದ ಮತಾಂತರದಿಂದ ಹಿಂದುಗಳನ್ನು ರಕ್ಷಿಸುವಲ್ಲಿ ಪಾಕ್ ವಿಫಲ: ಅಲ್ಲಿಯದ್ದೇ ಸಂಸದೀಯ ಸಮಿತಿಯ ವರದಿ!
ಏತನ್ಮಧ್ಯೆ ಎನ್ಸಿಪಿಯ ರಾಜ್ಯ ಅಧ್ಯಕ್ಷ ಜಯಂತ್ ಪಾಟೀಲ್ ಸುದ್ದಿಗಾರರ ಜತೆ ಮಾತನಾಡುತ್ತ, ಶುಕ್ರವಾರ ಅಪರಾಹ್ನ ಖಡ್ಸೆ ಅವರು ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ. ಅವರು ಕಳೆದ ಮೂವತ್ತೈದು ವರ್ಷ ಕಾಲ ಬಿಜೆಪಿಗೆ ಸೇವೆ ಸಲ್ಲಿಸಿದ್ದಾರೆ. ಈಗ ಅವರ ಸೇರ್ಪಡೆಯೊಂದಿಗೆ ರಾಜ್ಯಾದ್ಯಂತ ಇರುವ ಅವರ ಬೆಂಬಲಿಗರು, ಕಾರ್ಯಕರ್ತರು ಬಿಜೆಪಿ ತ್ಯಜಿಸಿ ಎನ್ಸಿಪಿ ಸೇರಲಿದ್ದಾರೆ. ಶಾಸಕರೂ ಪಕ್ಷ ತ್ಯಜಿಸಿದರೆ ಅಚ್ಚರಿ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಪಟಾಕಿ ಚೀಲದ ಮೇಲೇರಿದ ಜೀಪ್ ಬಾನೆತ್ತರ ಚಿಮ್ಮಿದ್ದರಿಂದ ಆರು ಜನಕ್ಕೆ ಗಾಯ
ಶರದ್ ಪವಾರ್ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದಕ್ಕೆ ಖಡ್ಸೆ ಒಲವು ತೋರಿದ್ದಾರೆ. ಬಿಜೆಪಿಯಲ್ಲಿ ಅವರಿಗೆ ಅನ್ಯಾಯವಾಗಿದೆ. ಮುಂದೆ ಇದೇ ರೀತಿ ಅನ್ಯಾಯ ಅನುಭವಿಸಿರುವವರು ಎನ್ಸಿಪಿ ಸೇರಲಿದ್ದಾರೆ. ಬಿಜೆಪಿಗೆ ರಾಜ್ಯದಲ್ಲಿ ದೊಡ್ಡ ಹೊಡೆತ ಸಿಗಲಿದೆ ಎಂದು ಪಾಟೀಲ್ ಹೇಳಿದರು.
ರಾಜೀನಾಮೆ ಅಂಗೀಕಾರ: ಖಡ್ಸೆ ಅವರ ರಾಜೀನಾಮೆ ಪತ್ರ ಇಂದು ಬೆಳಗ್ಗೆ ನನ್ನ ಕೈ ಸೇರಿದೆ. ಪಕ್ಷ ಅದನ್ನು ಅಂಗೀಕರಿಸಿದೆ. ಹೊಸ ಪಕ್ಷ ಸೇರುತ್ತಿರುವ ಅವರಿಗೆ ನಾವು ಶುಭಕೋರುತ್ತೇವೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)
ಮಾನವಹಕ್ಕುಗಳ ನೆಪದಲ್ಲಿ ಕಾನೂನು ಉಲ್ಲಂಘಿಸಿದರೆ ಕ್ಷಮಿಸಲಾಗದು: ಯುಎನ್ಎಚ್ಆರ್ಸಿಗೆ ಭಾರತದ ಎಚ್ಚರಿಕೆ