ಬೆಂಗಳೂರು: 2024ನೇ ಸಾಲಿನ ‘ಈ ಹೊತ್ತಿಗೆ’ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಕಥಾ ಪ್ರಶಸ್ತಿಗೆ ದಾವಣಗೆರೆಯ ಸದಾಶಿವ ಸೊರಟೂರು ಅವರ ಅಪ್ರಕಟಿತ ಕಥಾಸಂಕಲನ ‘ಧ್ಯಾನಕ್ಕೆ ಕೂತ ನದಿ’ ಆಯ್ಕೆಯಾಗಿದೆ. ಕಾವ್ಯ ಪ್ರಶಸ್ತಿಗೆ ಮಂಗಳೂರಿನ ನಿಜಾಮ್ ಗೋಳಿಪಡ್ಪು ಅವರ ‘ಅನಾಮಧೇಯ ಗೀರುಗಳು’ ಅಪ್ರಕಟಿತ ಕವನ ಸಂಕಲನ ಆಯ್ಕೆಯಾಗಿದೆ. ಎರಡೂ ಪ್ರಶಸ್ತಿಗಳು ತಲಾ ರೂ. 10,000 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿವೆ.
ನಿಜಾಮ್ ಗೋಳಿಪಡ್ಪು ಅವರು ಮಂಗಳೂರು ಜಿಲ್ಲೆಯ ಸಜೀಪನಡು ಗ್ರಾಮದವರು. ಅವಿಜ್ಞಾನಿ ಹೆಸರಲ್ಲಿ ಕವನಗಳನ್ನು ರಚಿಸಿರುವ ಗೋಳಿಪಡ್ಪು ಅವರು ಪದವಿಪೂರ್ವದವರೆಗೆ ಅಭ್ಯಾಸ ಮಾಡಿ, ತಮ್ಮ ಊರಿನಲ್ಲಿ ಕೂಲಿ ಕಾರ್ಮಿಕರಾಗಿದ್ದಾರೆ. ‘ಅನಾಮಧೇಯ ಗೀರುಗಳು’ ಇವರ ಪ್ರಥಮ ಕೃತಿಯಾಗಿದೆ.
ಇದನ್ನೂ ಓದಿ: ಸ್ವಯಂವರ ಪಾರ್ವತಿ ಯಾಗ; ಕೆ.ಆರ್. ಪುರದ ಶ್ರೀ ಮಹಾಬಲೇಶ್ವರ ಸ್ವಾಮಿ ದೇಗುಲದಲ್ಲಿ ಆಯೋಜನೆ
ಕಥೆಗಾರ, ಪತ್ರಕರ್ತ ದೇವು ಪತ್ತಾರ್ ಕಥಾ ಪ್ರಶಸ್ತಿ ವಿಭಾಗಕ್ಕೆ ಮತ್ತು ಕವಯತ್ರಿ ಪ್ರತಿಭಾ ನಂದಕುಮಾರ್ ಕಾವ್ಯ ಪ್ರಶಸ್ತಿ ವಿಭಾಗಕ್ಕೆ ತೀರ್ಪುಗಾರರಾಗಿದ್ದರು. ಮಾರ್ಚ್ನಲ್ಲಿ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಸಂಚಾಲಕಿ, ಕಥೆಗಾರ್ತಿ ಜಯಲಕ್ಷ್ಮೀ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದಾಶಿವ ಸೊರಟೂರು ಅವರು ಪ್ರಸ್ತುತ ಹೊನ್ನಾಳಿಯಲ್ಲಿ ವಾಸವಾಗಿದ್ದು, ಹರಿಹರ ತಾಲೂಕಿನ ಮಲೇಬೆನ್ನೂರಿನಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ‘ಅರ್ಧ ಮಳೆ ಅರ್ಧ ಬಿಸಿಲು’ ಇವರ ಮೊದಲ ಕಥಾ ಸಂಕಲನ. ‘ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ’, ‘ಗಾಯಗೊಂಡ ಸಾಲುಗಳು’ ಇವರ ಕವನ ಸಂಕಲನಗಳು.