ಭುವನೇಶ್ವರ: ರಿಯೋ, ಟೋಕಿಯೊ ಒಲಿಂಪಿಕ್ಸ್ಗಳಲ್ಲಿ ಸ್ಪರ್ಧಿಸಿರುವ ಅಥ್ಲೀಟ್ ದ್ಯುತಿ ಚಂದ್ ಬಗೆಗಿನ ಅಶ್ಲೀಲ ಮತ್ತು ಮಾನಹಾನಿ ಅಂಶಗಳನ್ನು ಪ್ರಕಟಿಸಿದ ನ್ಯೂಸ್ ವೆಬ್ಸೈಟ್ ಒಂದರ ಸಂಪಾದಕ ಸುಧಾಂಶು ರವಾತ್ನನ್ನು ಭುವನೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿಡಲಾಗಿದೆ.
‘ತಮ್ಮ ಬಗ್ಗೆ ಸುಳ್ಳು ಮತ್ತು ಮಾನಹಾನಿ ಸುದ್ದಿ ಪ್ರಕಟಿಸಿರುವುದಾಗಿ ದ್ಯುತಿ ಚಂದ್ ದೂರು ದಾಖಲಿಸಿದ ಬಳಿಕ ಸುಧಾಂಶು ರಾವತ್ ಮತ್ತು ಆತನ ವರದಿಗಾರ ಸ್ಮತಿರಂಜನ್ ಬೆಹರಾ ಎಂಬವರನ್ನು ನಾವು ವಿಚಾರಣೆಗಾಗಿ ಬಂಧನದಲ್ಲಿಟ್ಟಿದ್ದೇವೆ. ಅವರ ಕಚೇರಿಯ ಕಂಪ್ಯೂಟರ್ ಮತ್ತು ಇತರ ಕೆಲ ಸಾಮಗ್ರಿಗಳನ್ನೂ ಜಪ್ತಿ ಮಾಡಲಾಗಿದೆ. ಪ್ರದೀಪ್ ಪ್ರಧಾನ್ ಎಂಬ ಹೆಸರಿನ ಸಾಮಾಜಿಕ ಕಾರ್ಯಕರ್ತ ತಮ್ಮ ಬಗ್ಗೆ ಸುಳ್ಳು ಮಾಹಿತಿಗಳನ್ನು ಹರಡುತ್ತಿದ್ದಾನೆ ಎಂದೂ ದ್ಯುತಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಭುವನೇಶ್ವರದ ಪೊಲೀಸ್ ಉಪ ಆಯುಕ್ತ ಉಮಾ ಶಂಕರ್ ತಿಳಿಸಿದ್ದಾರೆ.
ಈ ಸುಳ್ಳು ಸುದ್ದಿಗಳಿಂದಾಗಿ ನನ್ನ ವರ್ಚಸ್ಸಿಗೆ ಧಕ್ಕೆಯಾಗಿದ್ದು, ಅದರಿಂದ ಒಲಿಂಪಿಕ್ಸ್ ವೇಳೆ ನಾನು ತೀವ್ರ ಮಾನಸಿಕ ಒತ್ತಡ ಎದುರಿಸಿದ್ದೆ. ಇದು ನನ್ನ ನಿರ್ವಹಣೆಯ ಮೇಲೂ ಪರಿಣಾಮ ಬೀರಿತ್ತು ಎಂದೂ 25 ವರ್ಷದ ದ್ಯುತಿ ದೂರಿದ್ದಾರೆ. ಆ ವೆಬ್ಸೈಟ್ ವಿರುದ್ಧ ಮಾನಹಾನಿ ಮೊಕದ್ದಮೆಯನ್ನೂ ಹೂಡುವುದಾಗಿ ದ್ಯುತಿ ತಿಳಿಸಿದ್ದಾರೆ. ಸುಧಾಂಶು ರಾವತ್ ತಮ್ಮ ಬಗ್ಗೆ ಮಾನಹಾನಿಕರ ಸುದ್ದಿಗಳನ್ನು ಪ್ರಕಟಿಸದಿರುವುದಕ್ಕೆ ಹಣದ ಬೇಡಿಕೆಯನ್ನೂ ಇಟ್ಟಿದ್ದರು ಎಂದು ದ್ಯುತಿ ಆರೋಪಿಸಿದ್ದಾರೆ. ದ್ಯುತಿ 2018ರ ಏಷ್ಯನ್ ಗೇಮ್ಸ್ನಲ್ಲಿ 2 ಬೆಳ್ಳಿ ಪದಕ ಜಯಿಸಿದ್ದರು.
ವೆಬ್ ಪೋರ್ಟಲ್ ಮತ್ತು ಯುಟ್ಯೂಬ್ ಚಾನಲ್ಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದನ್ನು ನಿಯಂತ್ರಿಸಲು ಸೂಕ್ತ ಕಾನೂನು ಇಲ್ಲದಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಪ್ರಕರಣ ದಾಖಲಾಗಿದೆ.
ಈ ಸಲ ಕಪ್ ನಮ್ದೇ ಎನ್ನುತ ಆರ್ಸಿಬಿ ಬೆಂಬಲಕ್ಕೆ ನಿಂತ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್!