ಹಳಿಯಾಳ: ತಾಲೂಕಿನೆಲ್ಲೆಡೆ ಕಬ್ಬು ಕಟಾವು ಹಂಗಾಮು ಜೋರಾಗಿ ನಡೆದಿದ್ದು, 170ಕ್ಕೂ ಹೆಚ್ಚು ಲಗಾಣಿ ತಂಡಗಳು (ಕಬ್ಬು ಕಟಾವ್ ಗ್ಯಾಂಗ್ಗಳು) ಕಟಾವು ಕಾರ್ಯದಲ್ಲಿ ತೊಡಗಿವೆ. ಆದರೆ, ಈ ಎಲ್ಲ ಲಗಾಣಿ ತಂಡಗಳಲ್ಲಿ ಈ ವರ್ಷ ನೇಪಾಳ ಗ್ಯಾಂಗ್ಗೆ ಬಾರಿ ಬೇಡಿಕೆ ಬಂದಿದೆ.
ಹೌದು, ಈ ವರ್ಷ ಮೊದಲ ಬಾರಿಗೆ ಕಬ್ಬು ಕಟಾವಿಗಾಗಿ ನೇಪಾಳ ಹಾಗೂ ಬಿಹಾರದ ಕಬ್ಬು ಕಟಾವ್ ತಂಡ ತಾಲೂಕಿಗೆ ಆಗಮಿಸಿದೆ. ಬೇರೆ ತಂಡದಲ್ಲಿರುವಂತೆ ಇವರಲ್ಲಿ ಹೆಣ್ಣಾಳುಗಳು ಇಲ್ಲ. ಬೆಳಗ್ಗೆ ನಸುಕಿನ ಜಾವಾ ಕಟಾವು ಆರಂಭಿಸುವ ಈ ತಂಡ ದಿನಕ್ಕೊಂದು ಲೋಡ್ ಕಟಾವು ಮಾಡುತ್ತಾರೆ.
ಕಬ್ಬು ಬೆಳೆಗಾರರನ್ನು ಕಾಡಿಸದೇ, ಅವರ ಅಪೇಕ್ಷೆಯಂತೆ ಕಬ್ಬು ಕಟಾವು ಮಾಡುತ್ತಿದ್ದಾರೆ. ಅವರ ಕಾರ್ಯದಕ್ಷತೆ, ವಿಶ್ರಾಂತಿಯಿಲ್ಲದೇ ಕಟಾವು ಕಾರ್ಯವು ಇಲ್ಲಿನ ಕಬ್ಬು ಬೆಳೆಗಾರರ ಮನಸೆಳೆದಿದ್ದು, ಎಲ್ಲರೂ ನೇಪಾಳಿ ಗ್ಯಾಂಗ್ಗೆ ದುಂಬಾಲು ಬಿದ್ದಿದ್ದಾರೆ.
ನಿರುದ್ಯೋಗ ಬಡತನ: ನೇಪಾಳದಲ್ಲಿ ನಿರುದ್ಯೋಗ, ಕಿತ್ತು ತಿನ್ನುತ್ತಿರುವ ಬಡತನದಿಂದಾಗಿ ಕುಟುಂಬ ನಿರ್ವಹಣೆಗಾಗಿ ನಾವು ಭಾರತಕ್ಕೆ ಬಂದಿದ್ದೇವೆ ಎನ್ನುತ್ತಾರೆ ನೇಪಾಳಿ ತಂಡದ ಮುಖಿಯಾ ಜಗದೀಶ ಚೌದರಿ.
ನೇಪಾಳದ ವೀರಗಂಜ ಭಾಗದ ಪಾರ್ಸಾ ಜಿಲ್ಲೆಯ ನಿವಾಸಿಯಾಗಿರುವ ಇವರು, ತಮ್ಮೊಂದಿಗೆ 24 ದಿನಗೂಲಿಗಳನ್ನು ಕಬ್ಬು ಕಟಾವಿಗಾಗಿ ಕರೆತಂದಿದ್ದಾರೆ. ಭಾರತದ ಕರೆನ್ಸಿಗೆ ಅಲ್ಲಿ ಬಾರಿ ಬೆಲೆಯಿದ್ದು, ಇಲ್ಲಿ ಕೆಲ ತಿಂಗಳು ದುಡಿದು ಆದಾಯ ಹೆಚ್ಚಿಸಿಕೊಂಡು ಕಬ್ಬಿನ ಹಂಗಾಮು ಮುಗಿದ ನಂತರ ನಾವು ನೇಪಾಳಕ್ಕೆ ಹಿಂದಿರುಗುತ್ತೇವೆ ಎನ್ನುತ್ತಾರೆ.
ಸದ್ಯ ಈ ತಂಡದ ಒಂದು ಬಳಗ ಮುರ್ಕವಾಡ ಜಿ.ಪಂ. ವ್ಯಾಪ್ತಿಯಲ್ಲಿ ಇನ್ನೊಂದು ಬಳಗವು ಅಂಬಿಕಾನಗರ ಜಿ.ಪಂ. ವ್ಯಾಪ್ತಿಯಲ್ಲಿ ಬಿಡಾರ ಹೂಡಿದೆ.