ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರನ್ನು ತುಂಬಾ ಹತ್ತಿರದಿಂದ ನೋಡಿ ಖುಷಿಯಾಯಿತು. ಅಷ್ಟು ಹತ್ತಿರದಿಂದ ಅವರನ್ನು ನೋಡುತ್ತೇನೆ ಎಂದುಕೊಂಡಿರಲಿಲ್ಲ. ತುಂಬಾ ಮುಕ್ತವಾಗಿ ಮಾತನಾಡಿದರು ಎಂದು ಭಾರತ ಪುರುಷರ ಹಾಕಿ ತಂಡದ ಗೋಲ್ಕೀಪರ್ ಶ್ರೀಜೇಶ್ ತಿಳಿಸಿದ್ದಾರೆ. ಟೋಕಿಯೊದಲ್ಲಿ ಪದಕ ಜಯಿಸಿದ ಬಳಿಕ ತವರಿಗೆ ವಾಪಸಾದ ಭಾರತ ಹಾಕಿ ತಂಡದ ಆಟಗಾರರನ್ನು ಪ್ರಧಾನಿ ಮೋದಿ ಭೇಟಿಯಾಗಿ ಅಭಿನಂದಿಸಿದರು. ಈ ವೇಳೆ ನರೇಂದ್ರ ಮೋದಿ ಅವರು ಆಟಗಾರರೊಂದಿಗೆ ಬೆರತು ಮುಕ್ತವಾಗಿ ಮಾತನಾಡಿಸಿದ್ದರು.
ಇದನ್ನೂ ಓದಿ: ಲಾರ್ಡ್ಸ್ನಲ್ಲಿ ಕಪಿಲ್ ದೇವ್ ದಾಖಲೆ ಮುರಿದ ಮೊಹಮದ್ ಸಿರಾಜ್
ಪ್ರಧಾನಿ ಅವರ ಭೇಟಿಗೆ ಹರ್ಷ ವ್ಯಕ್ತಪಡಿಸಿರುವ 33 ವರ್ಷದ ಶ್ರೀಜೇಶ್, ತವರು ಕೇರಳಕ್ಕೆ ಆಗಮಿಸಿದ ಬಳಿಕ ಸ್ಥಳೀಯ ವೆಬ್ಸೈಟ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಭೇಟಿ ವೇಳೆ ಆದ ಅನುಭವವನ್ನು ಮೆಲುಕು ಹಾಕಿದ್ದಾರೆ. ಭಾರತ ಹಾಕಿ ತಂಡ 41 ವರ್ಷಗಳ ಬಳಿಕ ಒಲಿಂಪಿಕ್ಸ್ನಲ್ಲಿ ಪದಕ ಜಯಿಸಿತು. ಆಟಗಾರರು ಹಾಗೂ ಕೋಚ್ ಬಳಿ ಬಂದು ಪ್ರಧಾನಿ ಅವರು ಪ್ರತಿಯೊಬ್ಬರನ್ನು ಅಭಿನಂದಿಸಿದರು. ನೀವು ಜಯಿಸಿದ ಕಂಚಿನ ಪದಕಕ್ಕೆ ಇಡೀ ದೇಶವೇ ಸಂಭ್ರಮಪಟ್ಟಿತು. ನಿಮ್ಮ ಸಾಧನೆ ನಮಗೆ ಹೆಮ್ಮೆ ತರಿಸಿತು ಎಂದು ಪ್ರಧಾನಿ ನಮ್ಮ ಬಳಿ ಹೇಳಿಕೊಂಡರು.
ಇದನ್ನೂ ಓದಿ: ಈ ಬಾರಿ ರಕ್ಷಾ ಬಂಧನಕ್ಕೆ ಪ್ರಧಾನಿ ಮೋದಿ ಬಯಸಿರುವ ಉಡುಗೊರೆ ಏನು ಗೊತ್ತೇ?
‘ಸರ್ (ಪ್ರಧಾನಿ) ನನ್ನ ಬಳಿ ಬಂದು ಶ್ರೀ, ತಂಡದಲ್ಲಿ ಪಂಜಾಬ್ ಹುಡುಗರು ಹೆಚ್ಚು ಮಂದಿ ಇದ್ದಾರೆ. ನೀವು ಕೂಡ ಪಂಜಾಬಿ ಕಲಿತುಕೊಳ್ಳಿ ಎಂದರು. ಹೌದು ಸರ್, ಹಲವು ಪಂಜಾಬ್ ಆಟಗಾರರೊಂದಿಗೆ ಆಡಿರುವೆ. ಸ್ವಲ್ಪ ಸ್ವಲ್ಪ ಪಂಜಾಬಿ ಕಲಿತಿರುವೆ. ನಾನು ಕೂಡ ಅವರಿಗೆ ಮಲೆಯಾಳಂ ಹೇಳಿಕೊಟ್ಟಿರುವೆ’ ಎಂದು ಹೇಳಿದೆ ಎಂದು ಶ್ರೀಜೇಶ್ ಹೇಳಿಕೊಂಡಿದ್ದಾರೆ. ಪ್ರತಿಷ್ಠಿತ ಕ್ರೀಡಾ ಪುರಸ್ಕಾರ ಖೇಲ್ರತ್ನ ಪ್ರಶಸ್ತಿಗೆ ಹಾಕಿ ದಿಗ್ಗಜ ಮೇಜರ್ ಧ್ಯಾನ್ಚಂದ್ ಹೆಸರನ್ನು ಮರುನಾಮಕರಣ ಮಾಡಿದ್ದಕ್ಕೆ ಶ್ರೀಜೇಶ್ ಸಂತೋಷ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಅವರ ಈ ನಿರ್ಧಾರ ಹಾಕಿ ಕೊಟ್ಟ ಶ್ರೇಷ್ಠ ಗೌರವ ಎಂದಿದ್ದಾರೆ.
EXCLUSIVE: Olympic bronze medallist @16Sreejesh talks about his interaction with PM @narendramodi; adds move to rename India's top sporting award to Major Dhyan Chand Khel Ratna an honour for the sport of hockey. pic.twitter.com/5nAT7Z47OV
— Asianet Newsable (@AsianetNewsEN) August 17, 2021