ಇತರ ಭಾಷೆಗಳ ಮೇಲೆ ಹಿಂದಿ ಹೇರಿಕೆಯ ಬಗ್ಗೆ ಮತ್ತು ಹಿಂದಿ ದಿವಸ್ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ ಮತ್ತು ಚರ್ಚೆಯಾಗುತ್ತಲೇ ಇದೆ. ಇತ್ತೀಚೆಗಷ್ಟೇ, ಹಿಂದಿ ದಿವಸ್ನ ಸಂದರ್ಭದಲ್ಲಿ ದರ್ಶನ್, ಧನಂಜಯ್, ಸತೀಶ್ ನೀನಾಸಂ, ರಿಷಭ್ನಿ ಶೆಟ್ಖಿ, ನಿಖಿಲ್ ಕುಮಾರ್, ನಿವೇದಿತಾ, ‘ಆ ದಿನಗಳು’ ಚೇತನ್ ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಇವತ್ತೂ ಸಿಗಲಿಲ್ಲ ರಿಲೀಫ್ … ಇನ್ನೂ ಮೂರು ದಿನಗಳ ಕಾಲ ರಾಗಿಣಿ ಜೈಲುವಾಸ
ಈಗ ನಟ-ನಿರ್ದೇಶಕ ‘ದುನಿಯಾ’ ವಿಜಯ್ ಸಹ ಈ ಕುರಿತು ಮಾತನಾಡಿದ್ದಾರೆ. ಹಿಂದಿಯನ್ನು ಹೇರಲು ಬಂದರೆ, ನಾವೆಂದೂ ಸುಮ್ಮನೆ ಕೂರುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲೊಂದು ಸಣ್ಣ ಪತ್ರ ಬರೆದಿರುವ ಅವರು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಹಿಂದಿ ದಿವಸ್ ಆಚರಿಸಲು ನಾವು ಹಿಂದಿ ಭಾಷಿಕರಲ್ಲ, ನಮ್ಮ ರಾಜ್ಯದಲ್ಲಿ ಆಡಳಿತ ಭಾಷೆ ಹಿಂದಿಯೂ ಅಲ್ಲ. ನನಗೆ ಹುಟ್ಟಿದಾಗಿನಿಂದಲೂ ಗೊತ್ತಿರುವುದು ಕನ್ನಡ ಒಂದೇ. ಆಗಿನಿಂದಲೂ ನಾನು ನಮ್ಮ ಕನ್ನಡದ ಮೇಲೆ ಬೇರೆ ಭಾಷೆಗಳ ಆಕ್ರಮಣ, ಯಾವ ಮಟ್ಟಕ್ಕೆ ಇದೆ ಎಂಬುದನ್ನು ಬಹಳ ಹತ್ತಿರದಿಂದ ಕಂಡಿದ್ದೇನೆ. ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಮಾತೃಭಾಷೆ ಜೀವನ ಮಾಡುವ ಬಗೆ ಮತ್ತು ಜೀವನ ಶೈಲಿಯನ್ನು ಕಲಿಸುತ್ತದೆ. ಹಾಗಂತ ನಾನು ಹಿಂದಿ ಕಲಿಯುವುದೇ ಇಲ್ಲ ಎಂದು ಹೇಳುತ್ತಿಲ್ಲ. ಕಲಿಯುತ್ತೇನೆ, ಅದರ ಅವಶ್ಯಕತೆ ನನಗೆ ಎಷ್ಟಿದೆಯೋ ಅಷ್ಟು ಮಾತ್ರ. ಅದನ್ನು ಬಿಟ್ಟು ಸಂಪೂರ್ಣವಾಗಿ ನಮ್ಮ ಮೇಲೆ ಹೇರಲು ಬಂದರೆ ನಾವೆಂದೂ ಸುಮ್ಮನೆ ಕೂರುವುದಿಲ್ಲ. ಕನ್ನಡದ ಬಗೆಗಿನ ಶ್ರದ್ಧೆ ಇಂದು ನನ್ನನ್ನು ಇಲ್ಲಿಯವರೆಗೂ ಕರೆತಂದಿದೆ. ಪ್ರತಿಯೊಬ್ಬ ಮನುಷ್ಯ ಜೀವನ ಪ್ರೀತಿಗಾಗಿ ಹಾತೊರೆಯುತ್ತಾನೆ. ಅದೇ ರೀತಿ ತನ್ನ ಅಸ್ಮಿತೆಗಾಗಿಯೂ ಆತ ಹಂಬಲಿಸುತ್ತಾನೆ. ನಾವು ಕನ್ನಡಿಗರು ಯಾವಾಗಲೂ ನಮ್ಮ ಕನ್ನಡತನದ ಅಸ್ಮಿತೆಗಾಗಿ ಹಂಬಲಿಸೋಣ. ನಮ್ಮ ಸಂವಿಧಾನದಂತೆ ನಾವು ಬದುಕುತ್ತಿದ್ದೇವೆ. ಬದುಕಲು ಬಿಡಿ. ಹಿಂದಿ ಹೇರಿಕೆಯನ್ನು ಎಂದಿಗೂ ಸಹಿಸುವುದಿಲ್ಲ.
ಜೈ ಕರ್ನಾಟಕ ಮಾತೆ. ದಿನವೂ ಕನ್ನಡ … ಅನುದಿನವೂ ಕನ್ನಡ …
ಹಿಂದಿ ಹೇರಿಕೆ ವಿರುದ್ಧ ದರ್ಶನ್ ಖಡಕ್ ಪೋಸ್ಟ್; ನಮ್ಮ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಬೇಡವೆಂದ ದಚ್ಚು