ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ರಾಷ್ಟ್ರೀಯ ಜನತಾದಳ (ಆರ್ಜೆಡಿ) ಹಾಗೂ ಕಾಂಗ್ರೆಸ್ ಜತೆಗಿನ ಮೈತ್ರಿಯಿಂದ ತಲೆಕೆಟ್ಟು ಹೋಗಿ ಸಂಯುಕ್ತ ಜನತಾದಳ (ಜೆಡಿಯು) ಮುಖಂಡ ನಿತೀಶಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿಯಿಂದ ಹೊರಗೆ ಬಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2ನೇ ಬಾರಿ ಆರ್ಜೆಡಿ ಜತೆ ಹೋಗಿ ನಿತೀಶಕುಮಾರ್ ಅವರಿಗೆ ಇದೀಗ ಅರಿವು ಮೂಡಿದೆ. ಇನ್ನು ಮುಂದೆ ಆರ್ಜೆಡಿ ಜತೆ ಹೆಣಗಾಡಲು ಸಾಧ್ಯವಿಲ್ಲ ಎಂಬುದು ಗೊತ್ತಾಗಿದೆ. ಆರ್ಜೆಡಿ ಮತ್ತು ಕಾಂಗ್ರೆಸ್ನಲ್ಲಿ ಭ್ರಷ್ಟಾಚಾರ, ಪರಿವಾರವಾದ ಹಾಗೂ ಸ್ವಜನಪಕ್ಷಪಾತವಿದೆ. ದೇಶದ ಹಿತಕ್ಕೆ ಮಾರಕವಾದ ಅಂಶಗಳೆಲ್ಲ ಆರ್ಜೆಡಿ ಮತ್ತು ಕಾಂಗ್ರೆಸ್ನಲ್ಲಿದೆ ಎಂದು ಆರೋಪಿಸಿದರು.
ಬಿಹಾರದಲ್ಲಿ ಬಿಜೆಪಿಗೆ ಸ್ವಂತ ಶಕ್ತಿಯಿದೆ. ನಿತೀಶ್ ಕುಮಾರ್ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂದು ಯಾರೂ ಹೇಳಿಲ್ಲ. ಎನ್ಡಿಎ ಜತೆ ಬರುತ್ತಾರೋ ಇಲ್ಲವೋ ಎಂಬುದು ಬಳಿಕ ಗೊತ್ತಾಗಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ನಮಗೆ ಗೊತ್ತಿರದ ಅನೇಕ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಅರ್ಧ ಗಂಟೆಯಲ್ಲಿ ಸಾಕಷ್ಟು ವಿಷಯ ಜನರಿಗೆ ಗೊತ್ತಾಗುತ್ತದೆ. ಜನರಿಗೆ ಪ್ರೇರಣೆ ನೀಡಲು ಇದು ಉತ್ತಮ ಮಾಧ್ಯಮವಾಗಿದೆ. ಪ್ರಧಾನಿಯವರು ಪ್ರತಿ ತಿಂಗಳು ಈ ಕಾರ್ಯಕ್ರಮ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಇಲ್ಲಿಯ ಕುಸುಗಲ್ಲ ರಸ್ತೆಯ ಮೈದಾನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಕಾರ್ಯಕ್ರಮದ ಬೃಹತ್ ಪರದೆಯ ಮೇಲೆ ಸಾರ್ವಜನಿಕರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನ್ ಕೀ ಬಾತ್ ವೀಕ್ಷಿಸಿದರು. ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಅಶೋಕ ಕಾಟವೆ, ಇತರರು ಇದ್ದರು.