ಮಂಗಳೂರು: ಕುಡುಕನೊಬ್ಬನಿಗೆ ರಸ್ತೆಯಲ್ಲಿ ಹತ್ತು ಲಕ್ಷ ರೂಪಾಯಿ ಸಿಕ್ಕಿದ್ದು, ಹಣ ಸಿಕ್ಕಿದ ಅರ್ಧಗಂಟೆಯಲ್ಲೇ ಕುಡುಕನಿಂದ ಪೊಲೀಸರು ಹಣ ಕಿತ್ತುಕೊಂಡಿದ್ದಲ್ಲದೇ ಒಂದು ವಾರ ಕಳೆದರೂ ಈ ಬಗ್ಗೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಈ ಘಟನೆ ಮಂಗಳೂರಿನ ಪಂಪ್ವೆಲ್ ಬಳಿ ನಡೆದಿದೆ.
ನ.27 ರಂದು ಪಂಪ್ವೆಲ್ ಬಳಿ ಮದ್ಯ ಸೇವನೆ ಮಾಡಿ ನಡೆದುಕೊಂಡು ಹೋಗುತ್ತಿದ್ದ ಶಿವರಾಜ್ ಎಂಬುವವರಿಗೆ ಅಲ್ಲೇ ಸಮೀಪದ ಬಾರ್ನ ಬಳಿ ದೊಡ್ಡ ಕಟ್ಟೊಂದು ಸಿಕ್ಕಿದೆ. ಇದೇನಪ್ಪಾ ಎಂದು ತೆರೆದು ನೋಡಿದ ಶಿವರಾಜ್ಗೆ ಒಂದು ಕ್ಷಣ ಶಾಕ್ ಆಗಿದೆ. ಯಾಕಂದ್ರೆ ಕಟ್ಟಿನಲ್ಲಿ ಐನೂರು ಮತ್ತು ಎರಡು ಸಾವಿರ ಮುಖಬೆಲೆಯ ಬರೋಬ್ಬರಿ ಹತ್ತು ಲಕ್ಷ ರೂಪಾಯಿ ಹಣವಿತ್ತು.
ಮದ್ಯವ್ಯಸನಿಯಾಗಿದ್ದ ಶಿವರಾಜ್ ಆ ಹಣವನ್ನು ವಾರಸುದಾರರಿಗೆ ಹಿಂದಿರುಗಿಸಲು ನೋಡಿದ್ರೆ, ಅದ್ರಲ್ಲಿ ವಾರಸುದಾರರ ಯಾವುದೇ ಮಾಹಿತಿ ಇರಲಿಲ್ಲ. ಹೀಗಾಗಿ ಮೊದಲೇ ಮದ್ಯಪ್ರಿಯನಾದ ಶಿವರಾಜ್ ಅದೇ ನೋಟಿನ ಕಂತೆಯಲ್ಲಿ ಒಂದು ಸಾವಿರ ರೂಪಾಯಿಯನ್ನು ತೆಗೆದು ಜತೆಗಿದ್ದವನಿಗೂ ಒಂದು ನೋಟು ಕೊಟ್ಟು ಮತ್ತೆ ಬಾರ್ಗೆ ಹೋಗಿ ಮದ್ಯ ಖರೀದಿಸಿದ್ದಾನೆ.
ಕುಡುಕನಿಗೆ ಹತ್ತು ಲಕ್ಷ ರೂಪಾಯಿ ಸಿಕ್ಕ ವಿಚಾರ ಗೊತ್ತಾದ ಕೂಡಲೇ ಸ್ಥಳಕ್ಕೆ ಬಂದ ಕಂಕನಾಡಿ ಪೊಲೀಸರು ಹಣದ ಸಮೇತ ಶಿವರಾಜ್ನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ದಲ್ಲದೇ, ಮೂರು ದಿನಗಳ ನಂತರ ಆತನನ್ನು ಬಿಟ್ಟಿದ್ದಾರೆ. ಆದರೆ ಈ ಘಟನೆ ನಡೆದು ಒಂದು ವಾರ ಕಳೆದರೂ ಪೊಲೀಸರು ಈ ಬಗ್ಗೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಜತೆಗೆ ಹಣದ ವಾರಸುದಾರರೂ ಈ ಬಗ್ಗೆ ದೂರು ದಾಖಲಿಸಿಲ್ಲ.
ಪೊಲೀಸರನ್ನು ಕೇಳಿದ್ರೆ ಆ ಹಣವನ್ನು ವಾರಸುದಾರರಿಗೆ ಕೊಟ್ಟಾಗಿದೆ ಅಂತಾರೆ. ಆದ್ರೆ ನಾನು ಅಲ್ಲೇ 3 ದಿನಗಳ ಕಾಲ ಇದ್ದೆ. ಯಾರೂ ಹಣ ಕೇಳಿಕೊಂಡು ಬಂದಿಲ್ಲ. ಇವರು ಅದನ್ನು ಯಾರಿಗೂ ಕೊಟ್ಟಿಲ್ಲ. ಕೊಟ್ಟಿದ್ದರೆ ನನಗೆ ಗೊತ್ತಾಗುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ ಶಿವರಾಜ್. ಇದೀಗ ಕುಡುಕನ ಬಳಿಯಿಂದ ಸಿಕ್ಕ ಹಣವನ್ನು ತಾವೇ ಸೈಲೆಂಟಾಗಿ ನುಂಗಿ ಹಾಕಿದ್ದಾರಾ ಪೊಲೀಸರು ಎಂಬ ಅನುಮಾನ ಕಾಡುತ್ತಿದೆ.