ಲಖನೌ: ಹಬ್ಬದ ದಿನದಂದು ಕೆಲಸ ಮಾಡದೇ ತನ್ನ ಸಹೋದರಿಯೊಂದಿಗೆ ಮಾತನಾಡುತ್ತಿದ್ದರು ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ ಹೆಂಡತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಬುಲಂದರ್ಶಹರ್ನಲ್ಲಿ ನಡೆದಿದೆ.
ಸುಶೀಲಾ (45) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಆರೋಪಿ ದೇವಪಾಲ್ ವರ್ಮಾ (50) ಪೊಲೀಸರಿಗೆ ಶರಣಾಗಿದ್ದಾನೆ.
ಇದನ್ನೂ ಓದಿ: ಹೊಂಬಾಳೆ ಫಿಲಂಸ್ ಮೂಲಕವೇ ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ ಸಲಾರ್
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರನಾಥ್ ತಿವಾರಿ, ದೀಪಾವಳಿ ಪೂಜೆಯ ಬಳಿಕ ಸುಶೀಲಾ ತನ್ನ ಸಹೋದರಿಗೆ ಹಬ್ಬದ ಶೂಭಾಶಯಗಳನ್ನು ತಿಳಿಸಲು ಕರೆ ಮಾಡಿದ್ದಾರೆ. ತುಂಬಾ ಹೊತ್ತು ಮಾತನಾಡುತ್ತಿದ್ದನ್ನು ಗಮನಿಸಿದ ಆರೋಪಿ ದೇವಪಾಲ್ ಕುಪಿತಗೊಂಡು ತನ್ನ ಬಳಿ ಇದ್ದ ರೈಫಲ್ನಿಂದ ಆಕೆಯ ಕತ್ತು ಹಾಗೂ ಎದೆಯ ಭಾಗಕ್ಕೆ ಗುಂಡು ಹಾರಿಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಸುಶೀಲಾ ಸ್ಥಳದಲ್ಲೇ ಮರತಪಟ್ಟಿದ್ದು, ಆರೋಪಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ಘಟನೆ ನಡೆದ ವೇಳೆ ಆತ ಪಾನಮತ್ತನಾಗಿದ್ದ ಎಂದು ತಿಳಿದು ಬಂದಿದೆ. ಇದಲ್ಲದೆ ಆತ ತನ್ನ ಹೆಂಡತಿಯನ್ನು ಶಂಕಿಸುತ್ತಿದ್ದ ಎಂದು ತಿಳಿದು ಬಂದಿದೆ. ದಂಪತಿಯ ಪುತ್ರ ಹಿಮಾಂಶು ನೀಡಿದ ದೂರಿನ ಮೇರೆಗೆ FIR ದಾಖಲಿಸಲಾಗಿದ್ದು, ಚಾರ್ಜ್ಶೀಟ್ ಸಿದ್ದಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರನಾಥ್ ತಿವಾರಿ ತಿಳಿಸಿದ್ದಾರೆ.