ವಿಶೇಷ ವರದಿ
ಕರಾವಳಿಯ ಗ್ರಾಮಿಣ ಭಾಗದಲ್ಲಿ ಪ್ರಸ್ತುತ ನೀರಿನ ಬರ ಎದುರಾಗುತ್ತಿದೆ. ಕುಡಿಯುವ ನೀರಿನ ಕೊರತೆಯ ಜತೆಗೆ ಜಾನುವಾರುಗಳ ಮೇವಿನ ಕೊರತೆಯಾಗುತ್ತಿದೆ. ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ಜಾನುವಾರುಗಳ ಮೇವಿಗೆ ಪುರಕವಾಗುವಂತಹ ಜಾನುವಾರುಗಳಿಗೆ ಹುಲ್ಲು ಬೆಳೆಯುವ ಮಿನಿ ಬೀಜದ ಕಿಟ್ಗಳನ್ನು ವಿತರಣೆ ಮಾಡುವ ಯೋಜನೆಯನ್ನು ಪಶು ಸಂಗೋಪಾನ ಇಲಾಖೆ ಕೈಗೆತ್ತಿಕೊಂಡಿದೆ.
ರಾಜ್ಯದ ಸಾಧಾರಣ ಬರಪೀಡಿತ ತಾಲೂಕುಗಳಲ್ಲಿ ಗುರುತಿಸಿಕೊಂಡಿರುವ ಮಂಗಳೂರು ಹಾಗೂ ಮೂಡುಬಿದಿರೆ ತಾಲೂಕುಗಳಲ್ಲಿ ಮೊದಲ ಹಂತದಲ್ಲಿ ಜಾನುವಾರುಗಳಿಗೆ ಹುಲ್ಲು ಬೆಳೆಯುವ ಮಿನಿ ಬೀಜದ ಕಿಟ್ ವಿತರಣೆಗೆ ಯೋಜನೆ ರೂಪುಗೊಡಿದೆ. ಇದರಿಂದ ಜಾನುವಾರುಗಳು ಹುಲ್ಲಿನ ಕೊರತೆಯಿಂದ ಸಮಸ್ಯೆ ಎದುರಿಸಬಾರದು ಎನ್ನುವುದು ಉದ್ದೇಶ. ರಾಜ್ಯ ವಿಕೋಪ ಪರಿಹಾರ ನಿ-ಯಿಂದ ಬಂದ ಮೊತ್ತವನ್ನು ಬಳಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷವಾಗಿ ಸಾಧಾರಣ ಬರಪೀಡಿತ ತಾಲೂಕು ಎಂದು ೂಷಿಸಲಾದ ಮಂಗಳೂರು ಹಾಗೂ ಮೂಡುಬಿದಿರೆ ತಾಲೂಕುಗಳಿಗೆ ಹುಲ್ಲು ಬೆಳೆಯುವ ಬೀಜಗಳ ಮಿನಿ ಕಿಟ್ಗಳ ವಿತರಣೆಗೆ ಇಲಾಖೆ ಕ್ರಮ ಕೈಗೊಂಡಿದೆ.
*60 ದಿನಗಳಲ್ಲಿ ಜಾನುವಾರು ಮೇವು ರೆಡಿ
ಈಗಾಗಲೇ ಜಾನುವಾರುಗಳಿಗೆ ಕಾಲು ಬಾಯಿ ರೋಗದ ಲಸಿಕೆ ನೀಡುವ ಕೆಲಸದ ಜತೆಯಲ್ಲಿ ಹುಲ್ಲು ಬೆಳೆಯುವ 5,597 ಮಿನಿ ಕಿಟ್ಗಳನ್ನು ನೀಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಇದರಲ್ಲಿ ಮುಖ್ಯವಾಗಿ ಜೋಳ ಹಾಗೂ ಸೊರಗಂ ಹುಲ್ಲು ಬೆಳೆಯುವ ಬೀಜಗಳನ್ನು ಇಡಲಾಗಿದೆ. ಒಂದು ಕಿಟ್ನಲ್ಲಿ 6 ಕೆಜಿ ಬೀಜಗಳು ಇದ್ದು, ರೈತರಿಗೆ ಇರುವ ಜಮೀನು ಹಾಗೂ ನೀರಿನ ಲಭ್ಯತೆಯನ್ನು ನೋಡಿಕೊಂಡು ಇಲಾಖೆ ಬೀಜದ ಕಿಟ್ಗಳನ್ನು ನೀಡಲಿದೆ. ಸರಿಸುಮಾರು 60 ದಿನಗಳಲ್ಲಿ ಈ ಹುಲ್ಲು ಬೆಳೆಯುವಂತಹ ಬೀಜಗಳಿದ್ದು, ಸೊರಗಂ ಎನ್ನುವ ಹುಲ್ಲುವಂತೂ ಒಂದು ಬಾರಿ ಕಟಾವು ಮಾಡಿದ ಬಳಿಕ ಮತ್ತೆ ಚಿಗಿತುಕೊಳ್ಳುವಂತಹ ಹುಲ್ಲು ಆಗಿದೆ.
ಕುದುರೆಗಳಲ್ಲಿ ವಿಶೇಷ ಕಾಯಿಲೆ ಪತ್ತೆ
2022&2023ನೇ ಜಾನುವಾರು ಗಣತಿ ಮಾಹಿತಿಯಂತೆ ದ.ಕ ಜಿಲ್ಲೆಯಲ್ಲಿ 2.31 ಲಕ್ಷ ಜಾನುವಾರುಗಳಿದ್ದು, 1.50 ಲಕ್ಷ ಕಾಲುಬಾಯಿ ರೋಗಕ್ಕೆ ಲಸಿಕೆ ನೀಡಲಾಗಿದೆ. 81 ಸಾವಿರ ಜಾನುವಾರುಗಳಿಗೆ ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದೆ. ರಾಜ್ಯಾಧ್ಯಂತ ಕುದುರೆಗಳಲ್ಲಿ ವಿಶೇಷ ಕಾಯಿಲೆ ಪತ್ತೆಯಾಗಿದ್ದು, ಈಗಾಗಲೇ ಜಿಲ್ಲೆಯಲ್ಲಿರುವ 19 ಕುದುರೆಗಳ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈಗಾಗಲೇ ಪಕ್ಕದ ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯ ಮೂರು ಚೆಕ್ ಪೋಸ್ಟ್ಗಳಲ್ಲಿ ನಿಗಾ ವಹಿಸಲಾಗಿದೆ. ವಿಶೇಷವಾಗಿ ಸುಳ್ಯದ ಜಾಲ್ಸೂರು, ವಿಟ್ಲದ ಸಾರಡ್ಕ ಹಾಗೂ ಮಂಗಳೂರಿನ ತಲಪಾಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಈಗ ಹಕ್ಕಿಗಳ ವಲಸೆ ಇಲ್ಲದೇ ಇರುವುದರಿಂದ ಹಕ್ಕಿಜ್ವರದ ಭೀತಿ ದ.ಕದಲ್ಲಿ ಇಲ್ಲ. ಮುಖ್ಯವಾಗಿ ಕೇರಳದಿಂದ ಕೋಳಿಗಳನ್ನು ತರುವ ಕೆಲಸವಾಗುತ್ತಿಲ್ಲ. ಬದಲಾಗಿ ಇಲ್ಲಿಂದ ಕೇರಳಕ್ಕೆ ಸಾಗಾಟ ಇರುವುದರಿಂದ ಹಕ್ಕಿ ಜ್ವರದ ಸಮಸ್ಯೆ ಜಿಲ್ಲೆಯಲ್ಲಿ ಇಲ್ಲ ಎಂದು ಪಶು ಸಂಗೋಪಾನ ಇಲಾಖೆ ವಿಜಯವಾಣಿಗೆ ಮಾಹಿತಿ ನೀಡಿದೆ.
ಮೇವು ಬ್ಯಾಂಕ್ ಕೇಂದ್ರ ತೆರೆಯಲು ಚಿಂತನೆ
ಜಿಲ್ಲೆಯಲ್ಲಿ ಮೇವು ಕೊರತೆ ನೀಗಿಸುವ ನಿಟ್ಟಿನಲ್ಲಿ ಪಶು ಸಂಗೋಪನಾ ಇಲಾಖೆ ಮೇವು ಬ್ಯಾಂಕ್ ಕೇಂದ್ರ ತೆರೆಯಲು ಚಿಂತನೆ ನಡೆಸಿದೆ. ಈಗಾಗಲೇ ಇದಕ್ಕೆ ಪೂರಕವಾಗಿ ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಜಾಗಗಳ ಸ್ಥಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಇಲಾಖೆ ಸಂಗ್ರಹಸಿದ ಮೇವನ್ನು ಅಗತ್ಯ ಇರುವ ತಾಲೂಕುಗಳ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಲಿದೆ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ 12 ವಾರಗಳ ತನಕ ಜಾನುವಾರುಗಳಿಗೆ ಹುಲ್ಲಿನ ಸಮಸ್ಯೆ ಕಾಡದಂತೆ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತದಲ್ಲಿ ಸಾಧಾರಣ ಬರ ಪೀಡಿತ ಊರು ಎಂದು ಗುರುತಿಸಿದ ಮಂಗಳೂರು ಮತ್ತು ಮೂಡುಬಿದಿರೆಯಲ್ಲಿ ಹುಲ್ಲಿನ ಬೀಜದ ಕಿಟ್ ನೀಡುವ ಕೆಲಸವನ್ನು ಕೈಗೆತ್ತಿಕೊಂಡಿದ್ದೇವೆ. ಹೈನುಗಾರರಿಗೆ ಇದು ಬಹಳಷ್ಟು ಲಾಭಕರವಾಗಲಿದೆ. ಜಿಲ್ಲೆಯ ಹಲವಡೆ ಇದನ್ನು ವಿತರಿಸುವ ಯೋಜನೆಯೂ ಇದೆ.
ಡಾ. ಅರುಣ್ ಕುಮಾರ್ ಶೆಟ್ಟಿ, ಉಪನಿರ್ದೇಶಕ
ಪಶು ವೈದ್ಯಕಿಯ ಸೇವಾ ಇಲಾಖೆ& ದ.ಕ