ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ
ನಗರ ಹಾಗೂ ತಾಲೂಕಿನಾದ್ಯಂತ ಸೋಮವಾರ ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿದಿದ್ದರಿಂದ ಜನಜೀವನ ಅಸ್ತವ್ಯಸ್ಥಗೊಂಡಿತು. ಇನ್ನು ಜಿಟಿ ಜಿಟಿ ಮಳೆಯಿಂದ ರೈತರಿಗೆ ಬೆಳೆ ಹಾನಿಯಾಗುವ ಆತಂಕ ಎದುರಾಗಿದೆ.
ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರ-ವಹಿವಾಟು ಇಲ್ಲದೆ ಕುಳಿತುಕೊಳ್ಳುವಂತಾಯಿತು. ನಗರದ ಮಾರುಕಟ್ಟೆಗಳು ಕೆಸರಿನಿಂದ ತುಂಬಿಕೊಂಡಿದ್ದು, ಜನತೆ ಕಾಲಿಡಲು ಆಗದ ಪರಿಸ್ಥಿತಿ ನಿರ್ವಣವಾಗಿತ್ತು. ಹೀಗಾಗಿ ತರಕಾರಿ, ಹಣ್ಣಿನ ವ್ಯಾಪಾರಕ್ಕೆ ಮಂಕು ಕವಿದಂತಾಗಿತ್ತು.
ತಾಲೂಕಿನಲ್ಲಿ ಮೆಕ್ಕೆಜೋಳ, ಶೇಂಗಾ, ಹತ್ತಿ, ಬೆಳ್ಳುಳ್ಳಿ ಬೆಳೆಗಳು ಕಟಾವು ಹಂತಕ್ಕೆ ಬಂದಿವೆ. ಸದ್ಯ ಬೆಳೆಗಳಿಗೆ ಬಿಸಿಲಿನ ಅವಶ್ಯಕತೆಯಿದೆ. ಆದರೆ, ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಬೆಳೆಗಳು ಕೊಳೆಯುವ ಆತಂಕ ರೈತರನ್ನು ಕಾಡುತ್ತಿದೆ.