ಸೊರಬ: ತಾಲೂಕಿನ ಗಡಿ ಗ್ರಾಮ ರಾಮಾಪುರದ ಗ್ರಾಮ ದೇವತೆ ದ್ಯಾಮವ್ವ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ನೂತನ ರಥವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ತಾಲೂಕಿನ ತವನಂದಿ ಗ್ರಾಮದ ಕಲಾವಿದ ಸೂರಜ್ ಗುಡಿಗಾರ್ ರಥ ನಿರ್ಮಿಸಿದ್ದಾರೆ. ಗುರುವಾರ ಬೆಳಗ್ಗೆ ನೂತನ ರಥಕ್ಕೆ ಪೂಜೆ ಸಲ್ಲಿಸಿ ಮಹಿಳೆಯರು, ಮಕ್ಕಳು, ಗ್ರಾಮಸ್ಥರು ರಥ ಎಳೆದು ಸಂಭ್ರಮಿಸಿದರು.
ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ದ್ಯಾಮಣ್ಣ ಗಣೇಶಪ್ಪ ದೊಡ್ಡಮನಿ ಮಾತನಾಡಿ, ಹಳೇ ಕಾಲದ ದೇವಸ್ಥಾನವನ್ನು ಕಳೆದ 25 ವರ್ಷಗಳ ಹಿಂದೆ ನವೀಕರಿಸಲಾಗಿದ್ದು 5 ಬಾರಿ ಜಾತ್ರಾ ಮಹೋತ್ಸವ ನಡೆಸಲಾಗಿದೆ. ಈ ಬಾರಿ 11 ಲಕ್ಷ ರೂ. ಶಾಸಕರ ಅನುದಾನದ ಜತೆಗೆ ಗ್ರಾಮದಿಂದ 60 ಲಕ್ಷ ರೂ.ವೆಚ್ಚದಲ್ಲಿ ನೂತನ ರಥ ನಿರ್ಮಾಣ ಮಾಡಲಾಗಿದೆ. ಮಾ.12ರಿಂದ 20ರವರೆಗೆ ಜಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಗ್ರಾಮ ಸಮಿತಿ ಉಪಾಧ್ಯಕ್ಷ ಈರಪ್ಪ ದೇಸಾಯಿ, ಕಾರ್ಯದರ್ಶಿ ಉಡಚಪ್ಪ, ಸದಸ್ಯರಾದ ದೇವರಾಜ ವಡ್ಡರ್, ಅಣ್ಣಪ್ಪ ನಾಯಕ್ ಸೇರಿ ಮಹಿಳೆಯರು, ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.