ಬಾಗಲಕೋಟೆ: ಬಸವ ತತ್ವ ಪ್ರಸಾರಕ ಹಾಗೂ ಖ್ಯಾತ ಪ್ರವಚನಕಾರರಾಗಿದ್ದ 48 ವರ್ಷ ವಯಸ್ಸಿನ ಡಾ.ಈಶ್ವರ ಮಂಟೂರ ಸ್ವಾಮಿಗಳು ಇಂದು ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬುಧವಾರ ಸಂಜೆ ಎದೆನೋವು ಕಾಣಿಸಿಕೊಂಡಿದ್ದು, ಇಂದು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆಯೇ ಅಸುನೀಗಿದ್ದಾರೆ ಎನ್ನಲಾಗಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುನ್ನೂರು-ಮಧುರಖಂಡಿಯ ಬಸವ ಜ್ಞಾನ ಗುರುಕುಲ ಯೋಗಾಶ್ರಮದ ಅಧ್ಯಕ್ಷರೂ ಗುರುಗಳೂ ಆಗಿದ್ದ ಈಶ್ವರ ಮಂಟೂರ ಅಪಾರ ಸಂಖ್ಯೆಯ ಭಕ್ತರನ್ನು ಅಗಲಿದ್ದಾರೆ. ಅನೇಕ ಮಠಗಳು ಹಾಗೂ ಮಠಾಧೀಶರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಸ್ವಾಮೀಜಿ, ರಾಜ್ಯದ ವಿವಿಧೆಡೆ ಬಸವ ತತ್ವ ಪ್ರಸಾರಕ್ಕೆ ಹೋಗುತ್ತಿದ್ದರು. ಉತ್ತಮ ವಾಗ್ಮಿಗಳಾಗಿದ್ದು, ತಮ್ಮ ಪ್ರವಚನಗಳಿಗೆ ಹೆಸರಾಗಿದ್ದರು.
ಇದನ್ನೂ ಓದಿ: ದೆಹಲಿ ಕೋರ್ಟ್ನಲ್ಲಿ ಸ್ಫೋಟ: ಕಲಾಪಗಳು ಅಮಾನತು; ತನಿಖೆ ಆರಂಭ
ಸ್ವಾಮೀಜಿ ಡಾ.ಈಶ್ವರ ಮಂಟೂರ ಅವರಿಗೆ ನಿನ್ನೆ ಸಂಜೆ ಎದೆ ನೋವು ಕಾಣಿಸಿಕೊಂಡಿತ್ತು. ಜಮಖಂಡಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಇಂದು ಬೆಳಗ್ಗೆ ಬಾಗಲಕೋಟೆ ನಗರದ ಕೆರೂಡಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವೈದ್ಯರು ಎಲ್ಲಾ ತಯಾರಿ ಮಾಡಿಕೊಂಡಿದ್ದು, ಮಾರ್ಗದ ಎದುರು ಆಂಬುಲೆನ್ಸ್ ಸಹ ಕಳಿಸಲಾಗಿತ್ತು. ಆದರೆ, ಮಧ್ಯಾಹ್ನ 12.30 ಕ್ಕೆ ಆಸ್ಪತ್ರೆಗೆ ಬರುವಷ್ಟರಲ್ಲಿ ಸ್ವಾಮಿಗಳ ಜೀವ ಹೋಗಿತ್ತು ಎನ್ನಲಾಗಿದೆ.
ಪ್ರಯಾಣ ಮಾಡುವಾಗ ಮುಧೋಳ ತಾಲೂಕಿನ ಲೋಕಾಪುರದವರೆಗೂ ಮಾತನಾಡುತ್ತಿದ್ದ ಸ್ವಾಮೀಜಿ, ಲೋಕಾಪುರದ ಹತ್ತಿರ ಇದ್ದಾಗ ದಿಢೀರ್ ಮಾತು ನಿಲ್ಲಿಸಿದರು ಎಂದು ಆಪ್ತರು ಹೇಳಿಕೊಂಡಿದ್ದಾರೆ. ಮಧ್ಯಾಹ್ನ 12 ಗಂಟೆ ವೇಳೆಗೆ ಜೀವ ಬಿಟ್ಟಿರಬೇಕು; ಸ್ವಾಮೀಜಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿರುವ ಸಾಧ್ಯತೆ ಇದೆ ಎಂದು ಬಾಗಲಕೋಟೆ ಕೆರೂಡಿ ಆಸ್ಪತ್ರೆಯ ಡಾ.ನಾರಾಯಣ ಅಭಿಪ್ರಾಯಪಟ್ಟಿದ್ದಾರೆ.
ಬಾಗಲಕೋಟೆಯಿಂದ ಹುನ್ನೂರು-ಮಧುರಖಂಡಿ ಆಶ್ರಮಕ್ಕೆ ಪ್ರಾರ್ಥಿವ ಶರೀರವನ್ನು ಭಕ್ತರ ದರ್ಶನಕ್ಕಾಗಿ ಕೊಂಡೊಯ್ಯಲಾಗಿದೆ.
ಇಂದೂ ನಡೆದಿದೆ ಜಾಕ್ವೆಲಿನ್ ವಿಚಾರಣೆ; ಸಲ್ಮಾನ್ರ ‘ದ-ಬಾಂಗ್’ ಟೂರ್ನಿಂದ ನಟಿ ಔಟ್!