ಬೆಂಗಳೂರು: ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ವಿಶ್ವವಿದ್ಯಾಲಯಗಳ ಸಂಶೋಧನಾ ಚಟುವಟಿಕೆಗಳಿಗೆ ನಿಧಿ ಹಂಚಿಕೆಯಲ್ಲಿ ಭಾರತವು ಹಿಂದುಳಿದಿದೆ. ಸಂಶೋಧನೆ ಮತ್ತು ನಾವಿನ್ಯತೆಗಳು ಜೀವಸೆಲೆಯಾಗದಿದ್ದರೆ, ಕಲಿಕೆಯು ನಿಂತ ನೀರಾಗಲಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ಬೆಂಗಳೂರು ನಗರ ವಿಶ್ವವಿದ್ಯಾಲಯದ 2ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಷಣ ಮಾಡಿದ ಅವರು, ಸಂಶೋಧನೆ ಇಲ್ಲದಿದ್ದರೆ ಯಾವುದೇ ಪ್ರಗತಿ, ಹೊಸತನ ಮತ್ತು ಆಲೋಚನೆಗಳಿರುವುದಿಲ್ಲ ಎಂದು ಹೇಳಿದ್ದಾರೆ.
ಹೆಚ್ಚಿನ ಜವಾಬ್ದಾರಿ ಹೊರಬೇಕಿದೆ
ಬಹುತೇಕ ವಿವಿಗಳಲ್ಲಿ ನಿಧಿಯ ಕೊರತೆಯಿಂದಾಗಿ ಸಂಶೋಧನೆಯು ಹಿಂದಿನ ಸ್ಥಾನದಲ್ಲಿ ಉಳಿದುಕೊಂಡಿದೆ. ಸಂಶೋಧನಾ ಚಟುವಟಿಕೆಗಳಿಗೆ ಸಾಕಷ್ಟು ಹಣ ವಿನಿಯೋಗಿಸಲು ರಾಜ್ಯ ಮತ್ತು ಯುಜಿಸಿ ಎರಡೂ ಕಡೆಯಿಂದ ಕಡ್ಡಾಯವಾಗಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಒಳ್ಳೆಯ ಮನುಷ್ಯನಾಗಲು ಕೇವಲ ಪ್ರತಿಭೆ ಮತ್ತು ಕೌಶಲಗಳಿದ್ದರೆ ಮಾತ್ರ ಸಾಲದು. ಗುಣಮಟ್ಟದ ವಿದ್ಯಾರ್ಥಿಗಳನ್ನು ಹುಟ್ಟಿಹಾಕಲು ಶಿಕ್ಷಕರು ಮತ್ತು ವಿಶ್ವವಿದ್ಯಾಲಯಗಳು ಹೆಚ್ಚಿನ ಜವಾಬ್ದಾರಿ ಹೊರಬೇಕಿದೆ. ಪದವಿ, ಪದಕ, ರ್ಯಾಂಕ್ಗಳನ್ನು ಪಡೆಯುವುದು ಮಾತ್ರವಲ್ಲ, ವಿದ್ಯಾರ್ಥಿಗಳು ಜ್ಞಾನದ ಜತೆಗೆ ಉತ್ತಮ ಸಂಸ್ಕಾರ, ವಿವೇಕ, ಮಾನವೀಯತೆ, ಸಾಮಾನ್ಯ ಜ್ಞಾನ ಮತ್ತು ಉತ್ತಮ ನಡವಳಿಕೆಯನ್ನು ಬೆಳೆಸಿಕೊಳ್ಳುವುದು ಅಷ್ಟೇ ಮುಖ್ಯ ಎಂದಿದ್ದಾರೆ.
ಇದನ್ನೂ ಓದಿ: ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ
40 ವರ್ಷದೊಳಗಿನ ಶೇ.30 ಮಂದಿಗೆ ಹೃದಯ ಕಾಯಿಲೆ
ಪ್ರಸ್ತುತ ಜೀನವ ಶೈಲಿಯು ಎಲ್ಲರದ್ದರೂ ಒತ್ತಡದಿಂದ ಕೂಡಿದೆ. ಶಿಶುವಿಹಾರ ಶಾಲೆಗಳಿಂದಲೇ (ಕಿಂಟರ್ ಗಾರ್ಟನ್) ಮಕ್ಕಳಿಗೆ ಒತ್ತಡ ಹಾಕಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಸರಿಯಾದ ಊಟ ತಿನ್ನುತ್ತಿಲ್ಲ, ಹಾಲು ಕುಡಿಯುವುದಿಲ್ಲ. ಅತ್ತ ತಾಯಂದಿರು ಕೂಡ 50ನೇ ವಯಸ್ಸಿಗೆ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಪರಿಣಾಮ, 40 ವರ್ಷದೊಳಗಿವ ಶೇ.30 ಜನರು ಇಂದು ಹೃಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಉತ್ತಮ ಹೃದಯ ಕಾಪಾಡಿಕೊಳ್ಳಲು ರಕ್ತದೊತ್ತಡ, ಸಕ್ಕರೆ, ಕೊಲೆಸ್ಟ್ರಾಲ್, ಅಧಿಕ ತೂಕ ಮತ್ತು ಸೊಂಟದ ಸುತ್ತಳತೆ, ಅತಿಯಾಸೆಗಳನ್ನು ನಿಯಂತ್ರಿಸುವುದು ಬಹಳ ಮುಖ್ಯ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಬೆಂಗಳೂರು ನಗರ ವಿಶ್ವವಿದ್ಯಾಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.