ಸೊರಬ: ಬರಗಾಲದ ಸಂದರ್ಭದಲ್ಲಿ ಕೆರೆಬೇಟೆ ನಿಷೇಧ ಮಾಡುವಂತೆ ಒತ್ತಾಯಿಸಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿಯಿಂದ ಮಂಗಳವಾರ ತಹಸೀಲ್ದಾರ್ ಹುಸೇನ್ ಸರಕಾವಸ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮಿತಿಯ ಅಧ್ಯಕ್ಷ ಜೆ.ಎಸ್.ಚಿದಾನಂದ ಗೌಡ ಮಾತನಾಡಿ, ತಾಲೂಕಿನಲ್ಲಿ ಬರಗಾಲ ಎದುರಾಗಿದ್ದು ಈಗಾಗಲೇ ರಾಜ್ಯ ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಜಲಮೂಲಗಳಲ್ಲಿ ನೀರಿಲ್ಲದೆ ಜನ ಮತ್ತು ಜಾನುವಾರುಗಳು ಪರಿತಪಿಸುವಂತಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಆನವಟ್ಟಿ ಸೇರಿದಂತೆ ತಾಲೂಕಿನಲ್ಲಿ ಅನೇಕ ಕೆರೆಗಳು ಬತ್ತುತ್ತಿವೆ. ಇದರಿಂದ ರೈತ ಸಮೂಹ ತೀವ್ರ ಸಂಕಷ್ಟದಲ್ಲಿದೆ. ಕೊಳವೆ ಬಾವಿಗಳಲ್ಲೂ ನೀರು ಕಡಿಮೆಯಾಗುತ್ತಿದ್ದು ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಈ ನಡುವೆ ಕೆಲ ಕೆರೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೀರಿದ್ದು ಕೆರೆಬೇಟೆ ನಡೆಸಿದರೆ ಕೆರೆಗಳು ಸಂಪೂರ್ಣ ಬತ್ತಿ ಹೋಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆರೆಯ ನೀರನ್ನು ರೈತರು ಸೇರಿದಂತೆ ಪ್ರಾಣಿ, ಪಕ್ಷಿಗಳು ಆಶ್ರಯಿಸಿಕೊಂಡಿವೆ. ಕೆರೆಬೇಟೆ ಮಾಡುವಾಗ ಕೂಣಿ ಚುಚ್ಚುವುದರಿಂದ ಹಾಗೂ ಕಾಲ್ತುಳಿದಿಂದ ನೀರು ಇಂಗಿ ಬತ್ತಿ ಹೋಗುತ್ತದೆ. ಜತೆಗೆ ಕೆರೆಯಲ್ಲಿರುವ ಕಪ್ಪೆ, ಏಡಿ, ಸೇರಿದಂತೆ ಅನೇಕ ಜಲಚರಗಳು ಸಾವನ್ನಪಿದ ನಂತರ ಕೆರೆಯ ನೀರು ಯಾವುದೇ ಜೀವಿಗಳಿಗೆ ಕುಡಿಯಲು ಬರುವುದಿಲ್ಲ. ಕೆಟ್ಟ ವಾಸನೆ ಬೀರುತ್ತದೆ. ಕೆರೆಯಲ್ಲಿನ ಅಳಿದುಳಿದ ನೀರನ್ನು ಉಳಿಸಲು ಕೆರೆಬೇಟೆ ನಿಷೇಧ ಮಾಡುವ ಮೂಲಕ ಕೆರೆಯ ನೀರು ಮತ್ತು ವನ್ಯ ಜೀವಿಗಳನ್ನು ಉಳಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ಉಪಾಧ್ಯಕ್ಷ ಶರತ್ ಸ್ವಾಮಿ, ಕಾರ್ಯದರ್ಶಿ ನಾಗಪ್ಪ ಬಿದರಗೇರಿ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಆರೇಕೊಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಅನಿಶ್ ಗೌಡ, ಪ್ರಮುಖರಾದ ಯು.ಬಿ.ಬಸವರಾಜ್, ಕುಮಾರ್, ಬಿ. ಮಂಜೇಶ್ ಇತರರಿದ್ದರು.