ಉಡುಪಿ: ಕೃಷ್ಣಮಠದಲ್ಲಿ ಶನಿವಾರ ಕಾರ್ತಿಕ ಮಾಸದ ಎರಡನೆಯ ದಿನದ ಲಕ್ಷದೀಪೋತ್ಸವ ಪ್ರಯುಕ್ತ ವಿಶೇಷವಾಗಿ ದೊಂದಿ ಬೆಳಕಿನ ತೆಪ್ಪೋತ್ಸವ ಜರುಗಿತು.
ಮೊದಲ ದಿನ ಹಣತೆಯಿಂದ ಮಾತ್ರ ತೆಪ್ಪದಲ್ಲಿ ದೀಪ ಬೆಳಗಿಸಲಾಗಿತ್ತು. ಹೀಗಾಗಿ ತೆಪ್ಪವು ಮಧ್ವಸರೋವರದ ಸುತ್ತ ನಿಂತವರಿಗೆ ಸರಿಯಾಗಿ ಕಾಣುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಶನಿವಾರ ತೆಪ್ಪದ ಆಚೀಚೆ ದೊಡ್ಡ ದೊಂದಿಯನ್ನು ಹಚ್ಚಿದ್ದು, ತೆಪ್ಪೋತ್ಸವದ ಮೆರುಗು ಇನ್ನಷ್ಟು ಹೆಚ್ಚಿತ್ತು. ರಥಬೀದಿಯಲ್ಲಿ ಸಾವಿರಾರು ಹಣತೆಗಳನ್ನು ಬೆಳಗಿಸಲಾಯಿತು.
ಉತ್ಸವದಲ್ಲಿ ಪರ್ಯಾಯ ಅದಮಾರು ಮಠದ ಹಿರಿಯ ಶ್ರೀ ವಿಶ್ವ ಪ್ರಿಯತೀರ್ಥ ಸ್ವಾಮೀಜಿ, ಪರ್ಯಾಯ ಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಶ್ರೀ ವಿದ್ಯಾಧೀಶ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ, ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಪಾಲ್ಗೊಂಡಿದ್ದರು.
ಕೋವಿಡ್ ಮಾರ್ಗಸೂಚಿಯಂತೆ ರಥಬೀದಿಗೆ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿತ್ತು.