ಖಾನಾಪುರ (ಮಹಾರಾಷ್ಟ್ರ): ಕರೊನಾ ವೈರಸ್ ವ್ಯಾಪಿಸಿದಂದಿನಿಂದಲೂ ಕ್ವಾರಂಟೈನ್ ಎನ್ನುವುದು ಮಾಮೂಲಿ ಆಗಿಬಿಟ್ಟಿದೆ. ಸೋಂಕು ಬಂದಿಲ್ಲದಿದ್ದರೂ ಸೋಂಕು ತಗುಲಿರುವ ಸಂದೇಹದಿಂದ ಕ್ವಾರಂಟೈನ್ ಆಗುವುದು ಒಂದೆಡೆಯಾದರೆ, ಸೋಂಕು ತಗುಲಿರುವುದು ಪತ್ತೆಯಾದರೆ, ಉಳಿದವರ ಸಂಪರ್ಕಕ್ಕೆ ಬರದೇ ಕ್ವಾರಂಟೈನ್ ಆಗುವುದು ಇನ್ನೊಂದೆಡೆ.
ಅಂತೆಯೇ, ಮನುಷ್ಯರು ಮಾತ್ರವಲ್ಲದೇ ನಾಯಿ, ಬೆಕ್ಕುಗಳಿಗೂ ಕರೊನಾ ಸೋಂಕು ಹರಡಿರುವುದು ಇದಾಗಲೇ ಕೆಲವು ಕಡೆಗಳಲ್ಲಿ ಬೆಳಕಿಗೆ ಬಂದಿವೆ. ಮನುಷ್ಯರಿಂದ ಸೋಂಕು ಪ್ರಾಣಿಗಳಿಗೂ ಅಂಟುವ ಸಾಧ್ಯತೆಗಳ ಬಗ್ಗೆ ಈಗಾಗಲೇ ಕೆಲವು ಕಡೆಗಳಲ್ಲಿ ವರದಿಯಾಗಿದೆ.
ಇದನ್ನೂ ಓದಿ: 5 ಸಾವಿರಕ್ಕೆ ಕಂದನ ಮಾರಿದ ತಾಯಿ! ಕೊಂಡರು ಆಸ್ಪತ್ರೆ ಸಿಬ್ಬಂದಿ! ಮುಂದೇನಾಯ್ತು?
ಈ ಹಿನ್ನೆಲೆಯಲ್ಲಿ ಇದೀಗ ಮನುಷ್ಯರಂತೆಯೇ ಪ್ರಾಣಿಗಳಿಗೂ ಕ್ವಾರಂಟೈನ್ ಮಾಡುವ ಅಗತ್ಯತೆ ಇದೆ. ತಮ್ಮ ಮುದ್ದಿನ ಸಾಕುಪ್ರಾಣಿಗೆ ಸೋಂಕು ತಗುಲಬಾರದು ಎನ್ನುವ ಕಾರಣಕ್ಕೆ ದೂರದಿಂದ ಪ್ರವಾಸ ಮಾಡಿಬಂದವರೆಲ್ಲಾ ತಮ್ಮ ಜತೆ, ನಾಯಿ-ಬೆಕ್ಕನ್ನೂ ಕ್ವಾರಂಟೈನ್ಗೆ ಒಳಪಡಿಸುವುದು ಅನಿವಾರ್ಯವಾಗಿದೆ.
ಅಂಥದ್ದೇ ಒಂದು ಘಟನೆ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಖಾನಾಪೂರ ತಾಲೂಕಿನ ಬೇನಾಪೂರ ಗ್ರಾಮದ ನಡೆದಿದೆ. ಕೋಲ್ಕತಾದಲ್ಲಿ ಚಿನ್ನದ ವ್ಯಾಪಾರ ಮಾಡುತ್ತಿದ್ದ ಶಿಂಧೆಯವರು ಲಾಕ್ಡೌನ್ ಹಿನ್ನೆಲೆಯಲ್ಲಿ ತಮ್ಮೂರು ಬೇನಾಪುರಕ್ಕೆ ಆಗಮಿಸಿದ್ದಾರೆ. ಕೋಲ್ಕತಾದಿಂದ ಇವರ ಗ್ರಾಮ ಸುಮಾರು 2 ಸಾವಿರ ಕಿಲೋ ಮೀಟರ್ ದೂರ ಇದೆ. ಇಷ್ಟು ದೂರದವರೆಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಇದನ್ನೂ ಓದಿ: ಮಾವಿನ ತೋಟದಲ್ಲಿ ಬಾವಲಿಗಳ ಹೆಣದ ರಾಶಿ: ಇನ್ನೇನು ಕಾದಿದೆಯೋ ಆಪತ್ತು!‘
ಪ್ರಾಣಿಗಳಿಗೂ ಕರೊನಾ ಸೋಂಕು ತಗುಲಬಹುದು ಎಂಬ ಸಂದೇಹ ಇರುವ ಕಾರಣ, ತಮ್ಮದೇ ಕೋಳಿ ಫಾರಂನಲ್ಲಿ ಅವರು ತಮ್ಮ ಮುದ್ದು ನಾಯಿಯನ್ನೂ ಕ್ವಾರಂಟೈನ್ನಲ್ಲಿ ಇಟ್ಟಿದ್ದಾರೆ. ಹೇಳಿ-ಕೇಳಿ ಇದು ಅತ್ಯುತ್ತಮ ಜಾತಿಯ ದುಬಾರಿ ನಾಯಿ. ಆದ್ದರಿಂದ ಅದಕ್ಕೆ ಯಾವುದೇ ರೀತಿಯ ಸೋಂಕು ತಗುಲಬಾರದು ಎಂಬುದು ನಮ್ಮ ಉದ್ದೇಶ ಎಂದಿದೆ ಶಿಂಧೆ ಕುಟುಂಬ.
ಸಾಲದು ಎಂಬುದಕ್ಕೆ ಈ ನಾಯಿಗೆ ಈಗ ದಿನಕ್ಕೆರಡು ಬಾರಿ ತಣ್ಣೀರಿನ ಸ್ನಾನ. ಕಾರಣ ಇಷ್ಟೇ. ಕೋಲ್ಕತದಲ್ಲಿ ಇರುವಾಗ ನಾಯಿಗೆ ನಿತ್ಯವೂ ಏರ್ ಕಂಡೀಷನ್ ಸೇವೆ ಇರುತ್ತಿತ್ತು. ಆದರೆ ಕೋಳಿ ಫಾರಂನಲ್ಲಿ ಈ ವ್ಯವಸ್ಥೆ ಇಲ್ಲ. ಅಷ್ಟೇ ಅಲ್ಲದೆ ಎ.ಸಿ ಹಾಕುವುದರಿಂದ ಕರೊನಾ ಸೋಂಕು ತಗುಲಬಹುದು ಎಂಬ ಆತಂಕ. ಆದ್ದರಿಂದ ಅದಕ್ಕೆ ಸೆಖೆ ಆಗಬಾರದು ಎನ್ನುವ ಕಾರಣದಿಂದ ತಣ್ಣೀರಿನ ಸ್ನಾನ ಮಾಡಿಸುತ್ತಿದ್ದೇವೆ. ಸ್ನಾನ ಮಾಡಿಸುವಾಗಲೂ ಎಲ್ಲಾ ರೀತಿಯ ಜಾಗೃತೆ ವಹಿಸುತ್ತಿದ್ದೇವೆ ಎಂದಿದೆ ಈ ಕುಟುಂಬ. (ಏಜೆನ್ಸೀಸ್)
ಭಾವಿ ಪತಿಗೆ ಕಳಿಸಿದಳೊಂದು ಜೋಕ್- ಆತನ ರಿಪ್ಲೈ ನೋಡಿ ಮದುವೆ ಮುರಿದೇ ಬಿಟ್ಳು!