More

    ‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’: ನಿರೀಕ್ಷೆಗೂ ಮೀರಿ ನಿಜವಾಯ್ತಾ ಕಾರ್ಣಿಕ?

    ಬೆಂಗಳೂರು: ರಾಜ್ಯದಲ್ಲಿನ ವರ್ಷಂಪ್ರತಿಯ ಕಾರ್ಣಿಕವೊಂದು ನಿರೀಕ್ಷೆಗೂ ಮೀರಿ ನಿಜವಾಯಿತಾ? ಎಂಬ ಪ್ರಶ್ನೆ ಮೂಡುವಂತೆ ಜಾಗತಿಕ ವಿದ್ಯಮಾನವೊಂದು ನಡೆದಿದೆ. ಈ ಕುರಿತಂತೆ ಜನರಲ್ಲಿ ಈಗ ಸಣ್ಣ ಚರ್ಚೆಯೊಂದು ಹುಟ್ಟಿಕೊಂಡಿದ್ದು, ಭವಿಷ್ಯವಾಣಿಯ ಬಗ್ಗೆ ಮಾತುಕತೆಗಳು ನಡೆಯುತ್ತಿವೆ.

    ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಕಾರ್ಣಿಕೋತ್ಸವ ರಾಜ್ಯದಲ್ಲೇ ವಿಶೇಷ ಸ್ಥಾನ ಪಡೆದಿದೆ. ದೇವರಗುಡ್ಡದ ಕಾರ್ಣಿಕ ನುಡಿಯುವ ಗೊರವಪ್ಪ ನಾಗಪ್ಪ ಉರ್ಮಿ 20 ಅಡಿ ಬಿಲ್ಲನ್ನೇರಿ ಪ್ರತಿವರ್ಷವೂ ಕಾರ್ಣಿಕ (ಭವಿಷ್ಯ) ನುಡಿಯುತ್ತಾರೆ. ಅದು ಸತ್ಯವಾಗುತ್ತದೆ ಎಂದೇ ಜನರು ನಂಬಿದ್ದಾರೆ. ಮಾತ್ರವಲ್ಲ, ಇದು ಈ ಬಾರಿ ನಿರೀಕ್ಷೆಗೂ ಮೀರಿ ಸತ್ಯವಾದಂತೆನಿಸುವ ವಿದ್ಯಮಾನವೊಂದು ನಡೆದಿದೆ.

    ದಸರಾ ಹಬ್ಬದ ಸಮಯದಲ್ಲಿ ಈ ಮಾಲತೇಶ ದೇವರ ಕಾರ್ಣಿಕೋತ್ಸವ ನಡೆಯುತ್ತದೆ. ಈ ವರ್ಷ ಅವರು ನುಡಿದ ಕಾರ್ಣಿಕ ‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’ ಎನ್ನುವುದು. ಇಷ್ಟು ಹೇಳುತ್ತಲೇ ಬಿಲ್ಲಿನಿಂದ ಧುಮುಕಿದ ಗೊರವಪ್ಪನನ್ನ ಭಕ್ತರು ಕೆಳಗೆ ಬೀಳದಂತೆ ಹಿಡಿದರು.

    ವರ್ಷದ ಭವಿಷ್ಯವಾಣಿ ಎಂದೇ ನಂಬಲಾಗುವ ಈ ಕಾರ್ಣಿಕದ ಅರ್ಥವನ್ನು ದೇವಸ್ಥಾನದ ಪ್ರಧಾನ ಅರ್ಚಕ ಮಾಲತೇಶ ಭಟ್ ಹೀಗೆ ವಿಶ್ಲೇಷಿಸಿದ್ದರು. ‘ಸಣ್ಣಸಣ್ಣ ರೈತರಿಗೂ ಪ್ರಯೋಜನವಾಗಲಿದೆ. ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ’ ಎಂಬುದೇ ಇದರ ಅರ್ಥ ಎಂದು ಅವರು ಹೇಳಿದ್ದರು.

    ಹೀಗಾಗಿ ರಾಜ್ಯದಲ್ಲಿ ಯಾರಾದರೂ ಯುವ ನಾಯಕ ರಾಜಕೀಯವಾಗಿ ಅತ್ಯುನ್ನತ ಸ್ಥಾನ ತಲುಪಬಹುದು ಎಂಬ ಚರ್ಚೆಗಳು ಜನರಲ್ಲಿ ನಡೆದಿದ್ದವು. ರಾಜ್ಯದಲ್ಲಂತೂ ಮುಖ್ಯಮಂತ್ರಿ ಬದಲಾವಣೆಯಾಗಿ ಯುವ ನಾಯಕರೊಬ್ಬರು ಸಿಎಂ ಸ್ಥಾನವನ್ನು ಅಲಂಕರಿಸಬಹುದು ಎಂದು ರಾಜಕೀಯ ವಲಯದಲ್ಲಿ ಲೆಕ್ಕಾಚಾರಗಳು ನಡೆಯುತ್ತಿದ್ದವು.

    ಅ. 4ರಂದು ಈ ಕಾರ್ಣಿಕ ನುಡಿಯಲಾಗಿದ್ದು, ಅದಾಗಿ ಮೂರು ವಾರ ಕಳೆಯುವಷ್ಟರಲ್ಲಿ ಬ್ರಿಟನ್​ನ ಪ್ರಧಾನಿಯಾಗಿ ಭಾರತೀಯ ಮೂಲದ, ಅದರಲ್ಲೂ ಕರ್ನಾಟಕದ ಇನ್​ಫೊಸಿಸ್​ನ ನಾರಾಯಣಮೂರ್ತಿ-ಸುಧಾಮೂರ್ತಿ ದಂಪತಿಯ ಅಳಿಯ ರಿಷಿ ಸುನಕ್ ಆಯ್ಕೆ ಆಗಿದ್ದಾರೆ. ಕಾರ್ಣಿಕದ ಪ್ರಕಾರ ವಿಶ್ಲೇಷಿಸುವುದಾದರೆ ಯುವಕನಿಗೆ ರಾಜಕೀಯದಲ್ಲಿ ಅತ್ಯುನ್ನತ ಸ್ಥಾನ ಸಿಗಲಿದೆ ಎನ್ನುವುದಾಗಿದೆ. ಅದರಂತೆ ಬ್ರಿಟನ್​ ಪ್ರಧಾನಿಯಾಗಿ ಆಯ್ಕೆ ಆಗಿರುವ ರಿಷಿ ಸುನಕ್​ಗೆ ಈಗ 42 ವರ್ಷ. ಇವರು ಬ್ರಿಟನ್​ನಲ್ಲಿ ಪ್ರಧಾನಿಯಾಗಿ ಪಟ್ಟಕ್ಕೇರಿದವರ ಪೈಕಿ ಅತಿ ಕಿರಿಯವರು, ಮಾತ್ರವಲ್ಲ ಏಷ್ಯಾ ಮೂಲದ ಮೊದಲಿಗರು. ಇವೆಲ್ಲ ಅಂಶಗಳನ್ನು ಇರಿಸಿಕೊಂಡು ಮಾತನಾಡಿಕೊಳ್ಳುತ್ತಿರುವ ಜನರು, ಕಾರ್ಣಿಕ ನಿರೀಕ್ಷೆಗೂ ಮೀರಿ ನಿಜವಾಯಿತಾ? ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಾರಂಭಿಸಿದ್ದಾರೆ.

    VIDEO: ‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’: ಕಾರ್ಣಿಕೋತ್ಸವದಲ್ಲಿ ‘ಯುವ ಸಿಎಂ’ ಕುರಿತು ಭವಿಷ್ಯವಾಣಿ…

    ಇದು ಭಾರತದ ಸಿನಿಮಾಗಳಲ್ಲೇ ಮಾಸ್ಟರ್​ಪೀಸ್​: ‘ಕಾಂತಾರ’ಕ್ಕೆ ಸೂಪರ್​ಸ್ಟಾರ್ ರಜನಿಕಾಂತ್ ಮೆಚ್ಚುಗೆ..

    ರಸ್ತೆ ತುಂಬಾ ರಾಶಿ ರಾಶಿ ಮೀನು; ಹೊತ್ತು ಸಾಗುತ್ತಿದ್ದ ಲಾರಿಯೇ ಪಲ್ಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts