ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆ ಏರಬೇಕೆಂಬ ಹಂಬಲದಲ್ಲಿರುವ ಕಾಂಗ್ರೆಸ್ ಬಿಜೆಪಿ ವಿರುದ್ದ ತನ್ನ ದಾಳಿಯನ್ನು ಮುಂದುವರೆಸಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರಣಿ ಟ್ವೀಟ್ಗಳನ್ನು ಮಾಡಿದ್ಧಾರೆ.
ಗ್ಯಾಸ್ ಬೆಲೆ ಹೆಚ್ಚಳ ಹಾಗೂ ಬೋಗಸ್ ಮತದಾರರ ಸೇರ್ಪಡೆ ಕುರಿತು ಟ್ವೀಟ್ ಮಾಡಿರುವ ಅವರು ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ಧಾರೆ.
ಗ್ಯಾಸ್ ಸಿಲಿಂಡರ್ಗೆ ನಮಸ್ಕರಿಸಿ
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವು ದಿನಗಳೇ ಬಾಕಿ ಉಳಿದಿವೆ. ಈ ಬಾರಿ ಮತದಾನ ಮಾಡುವ ಮುನ್ನ ನಿಮ್ಮ ಮನೆಯ ಎಲ್ಪಿಜಿ ಸಿಲಿಂಡರ್ಗೆ ನಮಸ್ಕರಿಸಿ ಯಾರಿಗೆ ಮತ ನೀಡಬೇಕೆಂದು ನಿರ್ಧರಿಸಿ. ಇದು ರಾಜ್ಯದ ಜನತೆಗೆ ನನ್ನ ವಿನಮ್ರ ಮನವಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಇರುವವರು ಕಾಳಸಂತೆಕೋರರು, ಬೆಟ್ಟಿಂಗ್ ದಂಧೆಕೋರರು: ಎಚ್.ಡಿ.ಕುಮಾರಸ್ವಾಮಿ ಆರೋಪ
ಚುನಾವಣೆ ಎದುರಿಸುವ ತಾಕತ್ತಿಲ್ಲ
ಅನ್ಯಾಯ, ಅಡ್ಡದಾರಿಗಳಲ್ಲೇ ನಡೆಯುತ್ತಿರುವ ಬಿಜೆಪಿ ನೈತಿಕವಾಗಿ ಚುನಾವಣೆ ಎದುರಿಸುವ ತಾಕತ್ತಿಲ್ಲದೆ ಬೆಂಗಳೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಬೋಗಸ್ ಮತದಾರರನ್ನು ವೋಟರ್ ಲಿಸ್ಟ್ನಲ್ಲಿ ಸೇರಿಸಿದೆ.
ಒಂದೇ ಕುಟುಂಬದ ಮತದಾರರು 2ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದ್ದು, ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.