ಬೆಂಗಳೂರು: ಬೇಕಾದರೆ ಕನಕಪುರದಲ್ಲಿ ಕಲ್ಲು ಒಡೆಯುತ್ತೇನೆ. ಆದರೆ, ದೆಹಲಿ ರಾಜಕೀಯಕ್ಕೆ ಮಾತ್ರ ಹೋಗುವುದಿಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಪಿಸಿಸಿ ಹುದ್ದೆ ಕೊಟ್ಟರೆ ಮಾತ್ರ ನಿಭಾಯಿಸುತ್ತೇನೆ. ಅದನ್ನು ಬಿಟ್ಟರೆ ನಾನು ದೆಹಲಿ ರಾಜಕೀಯಕ್ಕೆ ಹೋಗುವುದಿಲ್ಲ. ಬೇಕಾದರೆ, ಕನಕಪುರದಲ್ಲಿ ಕಲ್ಲು ಒಡೆಯುತ್ತೇನೆ ಅಥವಾ ರೇಷ್ಮೆ ಬೆಳೆಯುತ್ತೇನೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಡಿಕೆಶಿ ಗರಂ ಆದರು.
ಕೆಪಿಸಿಸಿ ಅಧ್ಯಕ್ಷ ನೇಮಕದ ಬಗ್ಗೆ ಸಂಬಂಧಪಟ್ಟವರನ್ನು ಕೇಳಿ. ಎಐಸಿಸಿ ಅಧ್ಯಕ್ಷರು ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ. ನಾನು ಅವರನ್ನು ಭೇಟಿ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷ ವಿಚಾರವಾಗಿ ನಾನು ಮಾತನಾಡಲ್ಲ. ನನಗೇನೂ ಆತುರ ಇಲ್ಲ ಎಂದರು.
ಇದೇ ವೇಳೆ ಇಡಿ ನೋಟಿಸ್ ವಿಚಾರವಾಗಿ ಮಾತನಾಡಿ ನನಗೆ ಇಡಿ ನೋಟಿಸ್ ಬಂದಿಲ್ಲ. ಸುಳ್ಳು ಸುದ್ದಿ ಮಾಡಿದ್ದೀರಾ, ನೀವೇ ಒಮ್ಮೆ ಪ್ರಶ್ನೆ ಮಾಡಿಕೊಳ್ಳಿ. ಇಡಿ ಅವರು ನಾವು ನೋಟಿಸ್ ಕೊಟ್ಟಿಲ್ಲವೆಂದು ಹೇಳಿದ್ದಾರೆ. ತಪ್ಪು ಸುದ್ದಿ ಹಾಕಬೇಡಿ.. ಚೆಕ್ ಮಾಡಿ ಸುದ್ದಿ ಕೊಡಿ ಎಂದು ಸಲಹೆ ನೀಡಿದರು. (ದಿಗ್ವಿಜಯ ನ್ಯೂಸ್)