More

    ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ, ದಳ ತೊರೆದು ಕಾಂಗ್ರೆಸ್ ಸೇರ್ಪಡೆ

    ಬೆಂಗಳೂರು:
    ಜೆಡಿಎಸ್‌ನ ಹಲವು ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ
    ಶಿವಮೊಗ್ಗದ ಜೆಡಿಎಸ್ ಮುಖಂಡ ಶ್ರೀಕಾಂತ್, ತುಮಕೂರಿನ ಮಾಜಿ ಶಾಸಕ ಶಫಿ ಅಹ್ಮದ್, ಮಾಜಿ ಮೇಯರ್ ನಾಗರಾಜ್, ಪಾಲಾಕ್ಷ, ಫಾರ್ಜಾನ ತಮ್ಮ ಅಪಾರ ಬೆಂಬಲಿಗರ ಜತೆ ಕಾಂಗ್ರೆಸ್ ಸೇರ್ಪಡೆಯಾದರು.
    ಕೆಪಿಸಿಸಿ ಕಚೇರಿಯ ಇಂದಿರಾ ಭವನದಲ್ಲಿ ಬುಧವಾರ ನಡೆದ ಕಿಕ್ಕಿರದ ಸಮಾರಂಭದಲ್ಲಿ ಮುಖಂಡರನ್ನು ಪಕ್ಷದ ಬಾವುಟ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಡಿ.ಕೆ.ಶಿವಕುಮಾರ್ ಸ್ವಾಗತಿಸಿದರು.

    ಕಾಂಗ್ರೆಸ್ ಬಲಪಡಿಸೋಣ
    ಈ ಸಂದರ್ಭದಲ್ಲಿ ಮಾತನಾಡಿದ ಡಿಕೆಶಿ, ಕಾಂಗ್ರೆಸ್ ಪಕ್ಷದ ನೀತಿ ಮತ್ತು ಸಿದ್ದಾಂತಗಳನ್ನು ಒಪ್ಪಿಕೊಂಡು ಬರುವವರಿಗೆ ಸ್ವಾಗತ. ಕಾಂಗ್ರೆಸ್ ಪಕ್ಷವೇ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ, ಎಲ್ಲರೂ ಸೇರಿ ಮತ್ತಷ್ಟು ಪಕ್ಷವನ್ನು ಬಲಪಡಿಸೋಣ ಎಂದರು.
    ನಾನು ಕೇವಲ ಪಕ್ಷಕ್ಕೆ ಆಹ್ವಾನ ನೀಡಲು ಬಂದಿಲ್ಲ. ಒಬ್ಬೊಬ್ಬ ನಾಯಕರು, ಕಾರ್ಯಕರ್ತರು ಕನಿಷ್ಠ 10 ಜನರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಗುರಿ ನೀಡಲು ಬಂದಿದ್ದೇನೆ. ಇತರರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕೆಲಸವನ್ನು ಬೆಂಗಳೂರಿಗೆ ಬಂದು ಮಾಡಬೇಕಾಗಿಲ್ಲ, ನೀವು ಇರುವ ಸ್ಥಳಗಳಲ್ಲೇ ಮಾಡಿ ಎಂದರು.
    ಕಳೆದ ವರ್ಷ ಇದೇ ಹೊತ್ತಿನಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಜೊತೆ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದೆವು. ಆದರೆ ಇಂದು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಅಂಬಾರಿ ಜೊತೆ ಹೆಜ್ಜೆ ಹಾಕುತ್ತಿದ್ದೇವೆ. ಇಡೀ ದೇಶವೇ ’ಕರ್ನಾಟಕ ಮಾದರಿ’ ಅನುಕರಣೆ ಮಾಡಲು ಕಾಯುತ್ತಿದೆ. ಈ ದೇಶದ ಪ್ರಧಾನಿ ಮೋದಿಯವರು ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುತ್ತದೆ ಎಂದರು. ಆದರೆ ಈಗ ಐದು ಗ್ಯಾರಂಟಿಗಳ ಬಗ್ಗೆ ಎಲ್ಲರೂ ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದರು.
    ಗೃಹಲಕ್ಷ್ಮೀ ಯೋಜನೆಯಿಂದ ಅತ್ತೆ- ಸೊಸೆಗೂ ಜಗಳ ತಂದು ಹಾಕುತ್ತಿದೆ ಸರ್ಕಾರ ಎಂದು ಅಪಪ್ರಚಾರ ಮಾಡಲಾಯಿತು. ಆದರೆ ಎಲ್ಲರ ಮಾತುಗಳು ಸುಳ್ಳಾಗಿವೆ, ಮೈಸೂರು ದಸರಾಗೆ ಲಕ್ಷಾಂತರ ತಾಯಂದಿರು, ಅಕ್ಕ- ತಂಗಿಯರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು, ಇಡೀ ಮೈಸೂರಿನ ತುಂಬಾ ಮಹಿಳೆಯರೇ ಇದ್ದರು. ಇಂತಹ ಬರಗಾಲದಲ್ಲೂ ಜನ ಸಂತೋಷದಿಂದ ಇರುವುದನ್ನು ನೋಡಿದೆ ಎಂದರು.
    ನಾವು ಕೇವಲ ಬಸ್ ಪ್ರಯಾಣ ಮಾತ್ರ ಉಚಿತ ನೀಡಿದ್ದೇವೆ. ಹೋಟೆಲ್, ದೇವಸ್ಥಾನ, ಶಾಪಿಂಗ್ ಸೇರಿದಂತೆ ಅನೇಕ ಕಡೆಗಳಲ್ಲಿ ಖರ್ಚು ಮಾಡಿರುತ್ತಾರೆ. ಇದಕ್ಕೆ ನಾವು ಹಣ ಕೊಟ್ಟಿದ್ದೇವೆಯೇ?
    ಗೃಹಲಕ್ಷ್ಮೀಯರು ಶಕ್ತಿ ತುಂಬಿದರು, ಗೃಹಲಕ್ಷ್ಮೀಯರು ಮನೆ ಬೆಳಗುತ್ತಿದ್ದಾರೆ, ತಮ್ಮ ಪಾಲಿಗೆ ಬಂದ ಹಣವನ್ನು ಸಂಸಾರಕ್ಕೆ ವಿತರಣೆ ಮಾಡುತ್ತಿದ್ದಾರೆ. ಇದು ಜನರಿಗೆ ನಮ್ಮ ಪಕ್ಷ ನೀಡಿರುವ ಶಕ್ತಿ ಎಂದರು.

    ಮೈಸೂರಿನಿಂದ ಓಡೋಡಿ ಬಂದೆ
    ಜೆಡಿಎಸ್ ಪಕ್ಷದ ಸಾವಿರಾರು ಕಾರ್ಯಕರ್ತರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳಲು ಮೈಸೂರಿನಿಂದ ಓಡೋಡಿ ಬಂದೆ. ಮುಖ್ಯಮಂತ್ರಿಗಳು ಸಹ ಈ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು, ಕೊನೆ ಕ್ಷಣದಲ್ಲಿ ಬೇರೆ ಕಾರ್ಯಕ್ರಮ ನಿಗದಿಯಾದ ಕಾರಣ ಬರಲಾಗಲಿಲ್ಲ ಎಂದರು.
    ಕಾಲನ ಓಟದಲ್ಲಿ ಯಾವುದೂ ಶಾಶ್ವತವಲ್ಲ, ಬಿಜೆಪಿ- ಜೆಡಿಎಸ್ ಗೆಳೆಯರಿಗೆ ಈ ಮಾತನ್ನು ಹೇಳುತ್ತಿದ್ದೇನೆ. ಜನರ ಸೇವೆಯೇ ಜನಾರ್ದನ ಸೇವೆ ಎಂದು ನಾವೆಲ್ಲಾ ಕೆಲಸ ಮಾಡಬೇಕಿದೆ ಎಂದರು.

    ರಾಜ್ಯಕ್ಕೊಂದು, ಕೇರಳಕ್ಕೊಂದು ಭಾಗವೇ?
    ಕುಮಾರಣ್ಣ ಮೈತ್ರಿ ಕರ್ನಾಟಕಕ್ಕೆ ಮಾತ್ರ ಎನ್ನುತ್ತಿದ್ದಾರೆ. ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕೇರಳಕ್ಕೆ ಒಂದು ಭಾಗ, ಕರ್ನಾಟಕಕ್ಕೆ ಒಂದು ಭಾಗ ಎಂದು ಹೇಗೆ ಮಾಡುತ್ತಾರೋ? ಎಂದು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು.
    ಜೆಡಿಎಸ್ ಎನ್‌ಡಿಎಗೆ ಸೇರಿದ ಕಾರಣ, ಕೇರಳ ಸೇರಿದಂತೆ ಇತರೇ ರಾಜ್ಯಗಳ ಜೆಡಿಎಸ್ ಪಕ್ಷದ ನೂರಾರು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಅದರಲ್ಲೂ ಇಂಡಿಯಾಗೆ ಸೇರುತ್ತಿದ್ದಾರೆ ಎಂದರು.

    ಹಾಜರಿದ್ದವರು
    ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಸಚಿವ ಮಧು ಬಂಗಾರಪ್ಪ, ವಕ್ತಾರ ಆಯನೂರು ಮಂಜುನಾಥ್, ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಗೀತಾ ಶಿವರಾಜ್ ಕುಮಾರ್ ಮತ್ತಿತರರು ಹಾಜರಿದ್ದರು.

    *ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಯಾರನ್ನೇ ಅಭ್ಯರ್ಥಿ ಮಾಡಿದರೂ ಗೆಲುವಿಗೆ ಶ್ರಮಿಸುತ್ತೇನೆ.
    ನಲವತ್ತು ವರ್ಷದಿಂದ ಕಾಂಗ್ರೆಸ್ ಅಡಿಯಾಳಾಗಿ ಶ್ರಮಿಸಿದ್ದೇನೆ. ಮುಂದೆಯೂ ಕಾಂಗ್ರೆಸ್‌ಗೆ ನಿಷ್ಟಾವಂತನಾಗಿ ಕೆಲಸ ಮಾಡ್ತೀನಿ.
    -ಎಸ್.ಶಫಿ ಅಹಮದ್, ಮಾಜಿ ಶಾಸಕ, ತುಮಕೂರು.

    *ಸುಮಾರು ವರ್ಷಗಳಿಂದ ನಾನು ಶ್ರೀಕಾಂತ್ ಕೆಲಸ ಮಾಡಿದ್ದೇವೆ. ಬಹಳ ಒಳ್ಳೆಯ ಮನುಷ್ಯ ಮತ್ತು ಒಳ್ಳೆಯ ರಾಜಕಾರಣಿ. ಕಾಂಗ್ರೆಸ್‌ಗೆ ಅವರನ್ನ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.
    -ಗೀತಾ ಶಿವರಾಜ್ ಕುಮಾರ್, ಕಾಂಗ್ರೆಸ್ ಮುಖಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts