ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಭೈರಸಂದ್ರ ಗಲಭೆಯಲ್ಲಿ ಕಾಂಗ್ರೆಸ್ ಮುಖಂಡರ ಕೈವಾಡ ಇದೆ. ಅಗತ್ಯವೆನಿಸಿದರೆ ಎನ್ಐಎಯಿಂದ ಪ್ರಕರಣದ ತನಿಖೆ ಆಗಲಿ ಎಂದು ಮಾಜಿ ಸಚಿವ ರೋಷನ್ಬೇಗ್ ಆಗ್ರಹಿಸಿದ್ದಾರೆ. ಈ ಹೇಳಿಕೆಗೆ ಕಿಡಿಕಾರಿರುವ ಶಾಸಕ ಜಮೀರ್ ಅಹ್ಮದ್ ಖಾನ್, ರೋಷನ್ ಬೇಗ್ ಬಿಜೆಪಿ ಕಚೇರಿ ಕಸ ಗುಡಿಸಲಿ ಎಂದಿದ್ದು ಗುದ್ದು ನೀಡಿದ್ದಾರೆ.
ರೋಷನ್ ಬೇಗ್ ಕಾಂಗ್ರೆಸ್ ಬಗ್ಗೆ ಸುಳ್ಳು ಆರೋಪ ಮಾಡಿ ಸಂಘ ನಿಷ್ಠೆ ಸಾಬೀತು ಮಾಡುವ ಬದಲು ಈಶ್ವರಪ್ಪನವರು ಹೇಳಿದಂತೆ ಬಿಜೆಪಿ ಕಚೇರಿಯ ಕಸ ಗುಡಿಸಲಿ. ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟು 10 ವರ್ಷದ ಷರತ್ತು ಸಡಿಲಿಸಿ 2023ರ ಚುನಾವಣೆಯಲ್ಲಾದರೂ ಬಿಜೆಪಿ ಟಿಕೆಟ್ ನೀಡಬಹುದು. ಈ ದಿಸೆಯಲ್ಲಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಲಿ ಎಂದು ಶಾಸಕ ಜಮೀರ್ ಅಹಮದ್ ಕಿಡಿಕಾರಿದ್ದಾರೆ. ಈ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ರೋಷನ್, ಜಮೀರ್ ಮೊದಲು ಸಿಎಂ ಯಡಿಯೂರಪ್ಪರ ವಾಚ್ಮನ್ ಆಗಲಿ ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿರಿ ಕಾಂಗ್ರೆಸ್ ವಿರುದ್ಧ ಅಖಂಡ ಶ್ರೀನಿವಾಸ್ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!
ಮಂಗಳವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೋಷನ್ ಬೇಗ್, ಬೆಂಗಳೂರು ಗಲಭೆಯಲ್ಲಿ ಕಾಂಗ್ರೆಸ್ ಮುಖಂಡರ ಕೈವಾಡವಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಜನರು ಭಯದಲ್ಲೇ ಜೀವನ ಮಾಡುವಂತಾಗಬಾರದು. ಗಲಭೆ ನಡೆದ ಸ್ಥಳಕ್ಕೆ ಮೌಲಾನಾಗಳು ಗೋರಿಪಾಳ್ಯದಿಂದ ಏಕೆ ಬರಬೇಕಿತ್ತು? ಟಿಪ್ಪುನಗರದಿಂದ, ಹೊರಗಿನಿಂದ ಜನರು ಗಲಾಟೆಗೆ ಏಕೆ ಬರಬೇಕಿತ್ತು? ಬೇರೆ ಪ್ರದೇಶದಿಂದ ಬಂದು ದಾಂಧಲೆ ಮಾಡಿದವರಿಗೆ ಶಿಕ್ಷೆ ಆಗಲಿ. ಆದರೆ, ಅಮಾಯಕರಿಗೆ ಶಿಕ್ಷೆ ಆಗುವುದು ಬೇಡವೆಂದು ಗೃಹ ಸಚಿವರಿಗೆ ತಿಳಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ಗಲಭೆಗೆ ಕಾಂಗ್ರೆಸ್ ಮುಖಂಡರು ಕಾರಣ ಎಂದ ರೋಷನ್ ಬೇಗ್ ವಿರುದ್ಧ ಸಿಡಿದೆದ್ದ ಜಮೀರ್, ಬೇಗ್ ಬಿಜೆಪಿ ಕಚೇರಿಯ ಕಸ ಗುಡಿಸಲಿ ಎಂದು ಲೇವಡಿ ಮಾಡಿದರು. ಇದಕ್ಕೆ ಮಾತಿನಲ್ಲೇ ಜಮೀರ್ನನ್ನು ತಿವಿದ ರೋಷನ್, ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರೆ ಅವರ ಮನೆ ವಾಚ್ಮನ್ ಆಗುತ್ತೇನೆ ಎಂದು ಜಮೀರ್ ಹೇಳಿದ್ದರು. ಮೊದಲು ಹೋಗಿ ಬಿಎಸ್ವೈ ಮನೆ ಮುಂದೆ ವಾಚ್ಮನ್ ಕೆಲಸ ಮಾಡಲಿ. ಜಮೀರ್ ಯಾರು ಎಂದು ನಾನು ಮಾತನಾಡಲಿ, ನಾನೊಬ್ಬ ಯುವ ಚಳವಳಿಯಿಂದ ಬಂದ ಹಿರಿಯ ನಾಯಕ. ಬೇರೆ ಯಾರಾದರೂ ಹಿರಿಯರು ನನ್ನ ವಿರುದ್ಧ ಮಾತಾಡಿದರೆ ಉತ್ತರ ಕೊಡುತ್ತಿದ್ದೆ ಎಂದು ಹೇಳಿದರು.
ಆರೋಪಿ ನವೀನ್ನನ್ನು ಗಲಭೆಕೋರರಿಂದ ಬಚಾವ್ ಮಾಡಿದ್ದೇ ಅಖಂಡ ಶ್ರೀನಿವಾಸ ಮೂರ್ತಿ!