ಕೊಪ್ಪಳ: ತಾಲೂಕಿನ ಟಣಕನಕಲ್ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಕುಡಿವ ನೀರು ಸ್ಥಿತಿ ಪರಿಶೀಲಿಸಿದರು.
ಗ್ರಾಮದಲ್ಲಿ ನಾಲ್ಕು ಬೊರ್ವೆಲ್ ಕೊರೆಸಿದ್ದು ಒಂದರಲ್ಲೂ ನೀರು ಬಂದಿಲ್ಲ. ಹೀಗಾಗಿ ಕುಡಿವ ನೀರು ಸಮಸ್ಯೆ ಎದುರಾಗಿದೆ. ಗ್ರಾಮದ ಸರ್ಕಾರಿ ಐಟಿಐ ಕಾಲೇಜಿಗೂ ನೀರಿನ ಬರ ಎದುರಾಗಿದೆ. ಈಗಿರುವ ಎರಡು ಬೋರ್ವೆಲ್ ಮತ್ತು ಚಿಲವಾಡಿ ಗ್ರಾಮದ ಮತ್ತೊಂದು ಬೋರ್ವೆಲ್ನಿಂದ ಗ್ರಾಮಕ್ಕೆ ಕುಡಿವ ನೀರು ಪೂರೈಸಲಾಗುತ್ತಿದೆ. ಐಟಿಐ ಕಾಲೇಜಿಗೆ ನೀರಿಲ್ಲದಂತಾಗಿದೆ. ಜನೆವರಿ ತಿಂಗಳಿಂದಲೇ ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಚಿಲವಾಡಗಿಯಲ್ಲಿ ಹೊಸದಾಗಿ ಬೋರ್ವೆಲ್ ಕೊರೆಸಿ. ಈಗಿರುವ ಪೈಪ್ಲೈನ್ಗೆ ಜೋಡಣೆ ಮಾಡಿ. ಕಾಲೇಜಿಗೆ ನೀರು ಪೂರೈಸಿ ಸಮಸ್ಯೆ ಸರಿಪಡಿಸಿ. ಕುಡಿವ ನೀರು ಸಮಸ್ಯೆ ಆದಲ್ಲಿ ತಕ್ಷಣ ಸ್ಪಂದಿಸಿ ಪರಿಹಾರ ಕಲ್ಪಿಸಿ. ಯಾವುದೇ ಕಾರಣಕ್ಕೂ ವಿಳಂಬ ಮಾಡಬೇಡಿ. ಈಗಿರುವ ನೀರಿನ ಮೂಲಗಳು ಎಷ್ಟು ದಿನಗಳಿಗೆ ಸಾಕಾಗಲಿವೆ ಎಂಬುದನ್ನು ನೋಡಿಕೊಳ್ಳಿ. ಕೊರತೆ ಆದಲ್ಲಿ ಖಾಸಗಿ ಬೋರ್ವೆಲ್ ಬಾಡಿಗೆ ಪಡೆಯುವುದು, ಹೊಸದಾಗಿ ಬೋರ್ವೆಲ್ ಕೊರೆಸುವಿಕೆ ಅಥವಾ ಟ್ಯಾಂಕರ್ ನೀರು ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸಿಇಒ ಸೂಚಿಸಿದರು.
ತಾಪಂ ಇಒ ದುಂಡಪ್ಪ ತುರಾದಿ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ವಿಲಾಸ ಬೋಸ್ಲೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಬಸಪ್ಪ ಇತರರಿದ್ದರು.