ಕೊಪ್ಪಳ: ಸಾಮಾಜಿಕ, ಆರ್ಥಿಕ ಹಾಗೂ ಜಾತಿವಾರು ಜನಗಣತಿ ಸಮೀಕ್ಷೆ ವರದಿ ಅಂಗೀಕಾರ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದ ಜಿಲ್ಲಾಡಳಿತ ಭವನದ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್ ನಡೆ ಖಂಡನೀಯ. ಗಂಗಾವತಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಸಾಸ್ ಎರಚಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದರು.
ಕೊಪ್ಪಳ ತಾಲೂಕಿನ ಮಹ್ಮದನಗರದ ಭೂಮಿ ಮಂಜೂರು ಮಾಡಬೇಕು. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳು, ಪ್ರಭಾಕರ್ ಭಟ್ನನ್ನು ಗಡಿಪಾರು ಮಾಡಬೇಕು. ಜಿಪಂ ಗ್ರಾಮೀಣ ಕುಡಿವ ನೀರು ಹಾಗೂ ನೈರ್ಮಲ್ಯ ಉಪವಿಭಾಗ ವ್ಯಾಪ್ತಿಯ ಎಸ್ ಡಿಪಿ ಯೋಜನೆಯಡಿ ಆಗಿರುವ ಅವ್ಯವಹಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕ್ರಾಂತಿ ಗೀತೆ ಹಾಡುವ ಮೂಲಕ ಇಡೀ ದಿನ ಧರಣಿ ನಡೆಸಿದರು. ಜಿಲ್ಲಾ ಸಂಚಾಲಕ ಶಿವಣ್ಣ ಹಟ್ಟಿ, ಜಿಲ್ಲಾ ಸಂಘಟನಾ ಸಂಚಾಲಕ ರಾಜಾಸಾಬ ಬಾಳೇಕಾಯಿ, ಮುಖಂಡರಾದ ಯಮನೂರಪ್ಪ ಗೊರ್ಲೆಕೊಪ್ಪ, ಮುತ್ತಣ್ಣ ಹುಡೇದ, ಲಕ್ಷ$್ಮಣ ಸಿಂಗನಾಳ, ದೊಡ್ಡಪ್ಪ ಪೂಜಾರ ನಿಡಶೇಸಿ, ದೇವಪ್ಪ ಟೆಂಗುಂಟಿ, ಗುಡದಪ್ಪ ಗುಡದಳ್ಳಿ ಇತರರಿದ್ದರು.