ಕೊಪ್ಪಳ: ತೋಟಗಾರಿಕೆ ಇಲಾಖೆಯಿಂದ ಒಂದು ದಿನದ ಖರೀದಿದಾರರ ಮತ್ತು ಮಾರಾಟಗಾರರ ಸಮ್ಮೇಳನವನ್ನು ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಆಯೋಜಿಸಲಾಗುತ್ತಿದೆ. ಸ್ಥಳಿಯ, ರಾಜ್ಯ, ಹೊರ ರಾಜ್ಯ, ದೇಶದ ಭಾಗಗಳಿಂದ ಖರೀದಿದಾರರ ಕಂಪನಿಗಳು ಭಾಗಿಯಾಗಲಿವೆ.
ಮಾವು, ದಾಳಿಂಬೆ, ಪೇರಲ, ದ್ರಾಕ್ಷಿ, ಬಾಳೆ, ಪಪ್ಪಾಯ ಹಾಗೂ ಮುಂತಾದ ಹಣ್ಣಿನ ಬೆಳೆಗಳ ಉತ್ಪನ್ನಗಳ ಮಾರುಕಟ್ಟೆ ಬೇಡಿಕೆ ಅನುಸಾರ ಖರೀದಾರರ ಮತ್ತು ಮಾರಾಟಗಾರರ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಬೆಳೆಗಾರರು ತಮ್ಮ ಬೆಳೆ, ತಳಿ, ಬೆಳೆಯ ವಿಸ್ತೀರ್ಣ ಹಾಗೂ ಪಹಣಿ ವಿವರವನ್ನು ಕಡ್ಡಾಯವಾಗಿ ಆಯಾ ತಾಲೂಕು ತೋಟಗಾರಿಕೆ ಕಚೇರಿಗಳಲ್ಲಿ ನೋಂದಣಿ ಮಾಡಿಸಬೇಕು. ನೋಂದಣಿಯಾದವರಿಗೆ ಮಾತ್ರ ಸಮ್ಮೇಳನದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗುವುದು.
ಎಫ್ ಪಿಒಗಳ ಸಂಪರ್ಕ, ಕೌಶಲ ಅಭಿವೃದ್ಧಿ, ವಿವಿಧ ಎಫ್ ಪಿಒಗಳೊಂದಿಗೆ ಸಂಪರ್ಕ, ಅಗತ್ಯ ತಂತ್ರಜ್ಞಾನ, ಮೂಲ ಸೌಕರ್ಯ, ಖರೀದಿ, ಹೊರ ದೇಶಕ್ಕೆ ನೇರವಾಗಿ ಮಾರಾಟ ಮಾಡುವುದಕ್ಕೆ ವೇದಿಕೆ ಕಲ್ಪಿಸುವುದು ಸಮ್ಮೇಳನದ ಉದ್ದೇಶ ಎಂದು ಉಪ ನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದ್ದಾರೆ.