ಕೊಪ್ಪಳ: ದುಶ್ಚಟ ಭವಿಷ್ಯಕ್ಕೆ ಮಾರಕ. ಮಕ್ಕಳು, ಯುವಕರು ಇದರಿಂದ ಹೊರಬರಬೇಕು ಎಂದು ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಲಹೆ ನೀಡಿದರು.
ಪೊಲೀಸ್ ಇಲಾಖೆಯಿಂದ ನಗರದ ಗವಿಮಠ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡ್ರಗ್ಸ್ ವಿರುದ್ಧ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡ್ರಗ್ಸ್ ಮಾರಕ. ಅದರ ಬಳಕೆಗೆ ಕಡಿವಾಣ ಬೀಳಬೇಕು. ಯುವಕರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುವುದು ದುರಂತ. ಈ ಬಗ್ಗೆ ಎಚ್ಚರದಿಂದ ಇರಬೇಕು. ಸರ್ಕಾರ ಹಾಗೂ ವಿವಿಧ ಸಂ, ಸಂಸ್ಥೆಗಳು ಸಾಕಷ್ಟು ಜಾಗೃತಿ ಕಾರ್ಯಕ್ರಮ ಮಾಡುತ್ತಿವೆ. ಕೆಟ್ಟ ವಿಷಯಗಳಿಂದ ಮಕ್ಕಳು ದೂರವಿರಬೇಕು.
ದೇಹವನ್ನು ಉತ್ತಮ ಕೆಲಸಗಳಿಗೆ ಬಳಸಬೇಕು. ದುಶ್ಚಟಕ್ಕೆ ಬಲಿಯಾದರೆ ಭವಿಷ್ಯವೇ ಹಾಳಾಗಲಿದೆ ಎಂದರು.
ದೇವರು ಇಂದ್ರಿಯ ಕೊಟ್ಟಿರುವುದು ಸತ್ಕಾರ್ಯಕ್ಕಾಗಿ. ಅವುಗಳಲ್ಲಿ ಅಗಾಧ ಶಕ್ತಿ ಇದೆ. ಅದನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಒಳ್ಳೆಯ ಅಂಶಗಳನ್ನು ಹೇಳಿ.
ಅಭ್ಯಾಸ ಮಾಡಿಸಿ. ಇದರಿಂದ ತಾನಾಗಿಯೇ ಮನಸ್ಸು ಒಳ್ಳೆಯ ಕಡೆಗೆ ಸೆಳೆಯುತ್ತದೆ. ದುರ್ಗುಣ ಬಿಟ್ಟರೆ ಮನುಷ್ಯನೇ ದೇವರಾಗುತ್ತಾನೆ. ಇರುವಷ್ಟು ದಿನ ಇತರರಿಗೆ ಒಳ್ಳೆಯದನ್ನು ಮಾಡಿ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ನಲಿನ್ ಅತುಲ್, ಎಸ್ಪಿ ಯಶೋದಾ ವಂಟಗೋಡಿ, ಎಡಿಸಿ ಸಾವಿತ್ರಿ ಕಡಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ ಕೆ.ವಿ., ಪೊಲೀಸ್ ಸಿಬ್ಬಂದಿ, ವಿವಿಧ ಶಾಲಾ&ಕಾಲೇಜು ವಿದ್ಯಾರ್ಥಿಗಳಿದ್ದರು.
ಜಾಗೃತಿ ಜಾಥಾ :ಡ್ರಗ್ಸ್ ವಿರುದ್ಧ ಜಾಗೃತಿ ಕಾರ್ಯಕ್ರಮಕ್ಕು ಮುನ್ನ ಜಾಥಾ ಮೂಲಕ ಅರಿವು ಮೂಡಿಸಲಾಯಿತು. ನಗರದ ಗದಗ ರಸ್ತೆ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ಜಾಥಾ ಬಸ್ನಿಲ್ದಾಣ, ಅಶೋಕ ವೃತ್ತ, ಜವಾಹರ ರಸ್ತೆ ಮಾರ್ಗವಾಗಿ ಗವಿಮಠದವರೆಗೆ ಸಾಗಿತು. ಶಾಲಾ&ಕಾಲೇಜು ವಿದ್ಯಾರ್ಥಿಗಳು ಜಾಗೃತಿ ಘೋಷಣೆ ಕೂಗಿ ಸಾರ್ವಜನಿಕರಿಗೆ ಡ್ರಗ್ಸ್ನಿಂದ ದೂರ ಇರುವಂತೆ ಮನವಿ ಮಾಡಿದರು. ಅಧಿಕಾರಿಗಳು ಪಾಲ್ಗೊಂಡಿದ್ದರು.