ಮಂಗಳೂರು/ಉಡುಪಿ: ದ.ಕ ಜಿಲ್ಲೆಯಲ್ಲಿ ಭಾನುವಾರ ಕುವೈತ್ನಿಂದ ಮರಳಿದ ಮೂವರು ಸೇರಿದಂತೆ 7 ಮಂದಿಗೆ ಕರೊನಾ ದೃಢಪಟ್ಟಿದೆ.
ಪುತ್ತೂರಿನ 70 ವರ್ಷದ ವೃದ್ಧರಲ್ಲಿ ಇನ್ಫ್ಲುಯೆಂಜಾ ಮಾದರಿ ಕಾಯಿಲೆ ಇದ್ದು ಅವರ ಗಂಟಲು ದ್ರವ ಪರೀಕ್ಷೆಯಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಜೂನ್ 17ರಂದು ಕುವೈತ್ನಿಂದ ಆಗಮಿಸಿದ್ದ ಇಬ್ಬರು ಹೆಂಗಸರು, ಓರ್ವ ಪುರುಷನಲ್ಲಿ ಸೋಂಕು ಕಾಣಿಸಿದೆ. ಬೆಳ್ತಂಗಡಿ ನಿವಾಸಿ 56 ವರ್ಷದ ಗಂಡಸಿನಲ್ಲಿ ತೀವ್ರ ಉಸಿರಾಟದ ತೊಂದರೆ ಕಾಣಿಸಿದ್ದು, ಅವರ ಪರೀಕ್ಷೆಯಲ್ಲೂ ಸೋಂಕು ದೃಢಪಟ್ಟಿದ್ದರೆ ರೋಗಿಯೊಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಓರ್ವ ಮಹಿಳೆ ಹಾಗೂ ಓರ್ವ ಪುರುಷನಲ್ಲೂ ಕರೊನಾ ದೃಢಪಟ್ಟಿದೆ.
ಕರೊನಾ ಚಿಕಿತ್ಸೆ ಮುಗಿಸಿ ಗುಣವಾದ 17 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಭಾನುವಾರ 259 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದ್ದು ದ.ಕ ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣ ಸಂಖ್ಯೆ 423ಕ್ಕೆ ಏರಿಕೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಭಾನುವಾರ ಕೋವಿಡ್-19 ಪಾಸಿಟಿವ್ ವರದಿ ದಾಖಲಾಗಿಲ್ಲ. 27 ವರದಿಗಳು ನೆಗೆಟಿವ್ ಬಂದಿದೆ. ಶನಿವಾರ ಮತ್ತು ಭಾನುವಾರ 112 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. 267 ಮಂದಿಯ ವರದಿ ಬರಲು ಬಾಕಿ ಇದೆ. ಒಟ್ಟು 1063 ಪಾಸಿಟಿವ್ ಪ್ರಕರಣದಲ್ಲಿ 965 ಮಂದಿ ಸೋಂಕಿತರು ಗುಣವಾಗಿ ಡಿಸ್ಚಾರ್ಜ್ ಆಗಿದ್ದಾರೆ. 96 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಕಾಸರಗೋಡಿನ ಆರು ಜನರಿಗೆ ಕರೊನಾ: ಕಾಸರಗೋಡು: ಜಿಲ್ಲೆಯ ಆರು ಮಂದಿ ಸಹಿತ ಕೇರಳದಲ್ಲಿ ಭಾನುವಾರ 133 ಮಂದಿಯಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 80 ಮಂದಿ ವಿದೇಶದಿಂದ, 43 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. ಇತರ ಒಂಬತ್ತು ಮಂದಿಗೆ ಸಂಪರ್ಕದಿಂದ ಮತ್ತು ಒಬ್ಬ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೋಂಕು ತಗುಲಿದೆ.
ಕಾನ್ಸ್ಟೆಬಲ್ಗೆ ಕರೊನಾ, ಬೈಂದೂರು ಠಾಣೆ ಬಂದ್: ಬೈಂದೂರು: ತಾಲೂಕಿನ ಬೈಂದೂರು ಪೊಲೀಸ್ ಠಾಣೆಯ ಓರ್ವ ಕಾನ್ಸ್ಟೆಬಲ್ಗೆ ಕರೊನಾ ಸೋಂಕು ದೃಢವಾಗಿದ್ದು, ಕುಂದಾಪುರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಠಾಣೆ ಹಾಗೂ ವೃತ್ತ ನಿರೀಕ್ಷಕರ ಕಚೇರಿ ಬಂದ್ ಮಾಡಲಾಗಿದ್ದು, ಸ್ಯಾನಿಟೈಸೇಷನ್ ಬಳಿಕ ಒಂದೆರಡು ದಿನಗಳಲ್ಲಿ ಠಾಣೆ ಪುನರಾರಂಭಿಸಲಾಗುವುದು. ಅಲ್ಲಿಯ ತನಕ ವೃತ್ತ ನಿರೀಕ್ಷಕರ ಹಳೆಯ ಕಚೇರಿಯಲ್ಲಿ ಕುಂದಾಪುರ ಉಪವಿಭಾಗದ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಎಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.