ಕಂಪ್ಲಿ: ಬೆಳೆ ರೋಗ ಹತೋಟಿ, ನಿರಂತರ ಆದಾಯ ಮತ್ತು ಮಣ್ಣಿನ ಫಲವತ್ತತೆ ಕಾಪಾಡಲು, ತಾಲೂಕಿನ ಲೀಲಾವತಿಕ್ಯಾಂಪಿನ ರೈತ ವಡ್ಡರ ಬಾಲಾಜಿ ಪರಸ್ಪರ ಅಂತರ ಬೆಳೆಯಾಗಿ ನಾನಾ ತೋಟಗಾರಿಕೆ ಬೆಳೆಗಳನ್ನು ಬೆಳೆದು ಗಮನಸೆಳೆದಿದ್ದಾನೆ.
ಇದನ್ನೂ ಓದಿ: ಬುಡ ಕೊಳೆಯುವ ರೋಗ ಹತೋಟಿಗೆ ತನ್ನಿ
ಎರಡು ಎಕರೆ ಪ್ರದೇಶದಲ್ಲಿ 5,531ತಳಿಯ ಚಿಲ್ಲಿ, ರಾಯದುರ್ಗ ಬದನೆ, ಬೆಂಡೆ, ಸಾಹೋ ಟಮೋಟೋ, ಇಂಡೋಸ್ ಚೆಂಡು ಹೂವು, ಜಿ9ವಿಲಿಯಮ್ಸ್ ಹಸಿರುಬಾಳೆ ಬೆಳೆದಿದ್ದಾನೆ.
ಅಂತರಬೆಳೆಗಳ ಕಾಂಡ, ಕಾಯಿ ಕೊರಕ ಕೀಟಗಳನ್ನು ಚೆಂಡು ಹೂವು ಆಕರ್ಷಿಸಿ ರೋಗಬಾಧೆ ತಪ್ಪಿಸುವ ಮೂಲಕ ಮೋಹಕಬಲೆಯಾಗಿ ಕಾರ್ಯನಿರ್ವಹಿಸುತ್ತದೆ.
ಅಂತರಬೆಳೆಗಳನ್ನು ಹಂತಹಂತವಾಗಿ ಬೇರೆಬೇರೆ ದಿನಗಳಲ್ಲಿ ಸಸಿ ನಾಟಿ ಮಾಡುವುದರಿಂದ ಮಾರುಕಟ್ಟೆ ಬೇಡಿಕೆ ಕುಸಿತ, ದರ ಕುಸಿತಗಳಿಂದ ಪಾರಾಗುವ ಜತೆಗೆ ನಿರಂತರ ಆದಾಯ ದೊರಕುತ್ತದೆ. ಒಂದು ಬೆಳೆ ಕೈಕೊಟ್ಟರೂ ಉಳಿದ ಬೆಳೆಗಳು ಆರ್ಥಿಕ ಸಂಕಷ್ಟದಿಂದ ಪಾರು ಮಾಡುತ್ತವೆ.
ಈಗಾಗಲೇ 550ಕೆಜಿ ಬದನೆ ಇಳುವರಿ ಪಡೆದಿದ್ದು, ಮುಂದಿನ ದಿನಗಳಲ್ಲಿ ಚಿಲ್ಲಿ, ಬೆಂಡೆ, ಬಾಳೆ, ಟಮೋಟೋ, ಚೆಂಡು ಹೂವು ಇಳುವರಿ ದೊರಕಲಿದೆ. ದಸರಾ, ದೀಪಾವಳಿ ಹೊತ್ತಿಗೆ ಚೆಂಡು ಹೂವು ದೊರಕುವುದರಿಂದ ಉತ್ತಮ ದರದಿಂದ ಲಾಭ ದೊರಕಲಿದೆ.
ಒಟ್ಟಾರೆ ಸುಮಾರು 1.50ಲಕ್ಷ ರೂ. ಉಳಿತಾಯ ನಿರೀಕ್ಷೆಯಿದೆ. ಮಲ್ಚಿಂಗ್ ಪದ್ಧತಿ ಅಳವಡಿಸಿಕೊಂಡಿದ್ದರಿಂದ ತೇವಾಂಶ ಸಂರಕ್ಷಣೆಯೊಂದಿಗೆ ಕಳೆ ನಿಯಂತ್ರಣ, ಮಣ್ಣಿನಿಂದ ಹರಡುವ ರೋಗ ನಿಯಂತ್ರಣಕ್ಕೂ ಸಹಕಾರಿಯಾಗಿದೆ.
ತೋಟಗಾರಿಕೆ ಅಂತರ ಬೆಳೆಗಳಿಂದಾಗಿ ನಿರಂತರ ಆದಾಯ, ಮಣ್ಣಿನ ಫಲವತ್ತತೆಯೊಂದಿಗೆ ರೋಗ ಬಾಧೆಯಿಂದ ಬೆಳೆಗಳನ್ನು ಕಾಪಾಡಲು ಸಾಧ್ಯ. ತೋಟಗಾರಿಕೆ ಇಲಾಖೆಯಿಂದ ರಿಯಾಯಿತಿ ಸೌಲಭ್ಯ ಪಡೆದಿದ್ದೆನೆ. ನರೇಗಾ ಕೂಲಿ ಸೌಲಭ್ಯ ಬಳಸಿಕೊಂಡಿದ್ದೇನೆ.
ವಡ್ಡರ ಬಾಲಾಜಿ, ತೋಟಗಾರಿಕೆ ರೈತ, ಲೀಲಾವತಿಕ್ಯಾಂಪ್, ಕಂಪ್ಲಿ.
ಅಂತರ ಬೆಳೆ ಪದ್ಧತಿಯಿಂದ ರೈತರಿಗೆ ಅನುಕೂಲವಿದೆ. ಕೀಟ ಹತೋಟಿ ಸಾಧಿಸಬಹುದು. ನಿರಂತರ ಹೆಚ್ಚುವರಿ ಆದಾಯ ಕಂಡುಕೊಳ್ಳಬಹುದು. ತೋಟಗಾರಿಕೆ ಇಲಾಖೆಯಿಂದ ಇರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.
ಆರ್.ಜೆ.ಕರಿಗೌಡರ್, ಸಹಾಯಕ ತೋಟಗಾರಿಕೆ ಅಧಿಕಾರಿ, ಕಂಪ್ಲಿ