ದೊಡ್ಡಬಳ್ಳಾಪುರ: ವಿದ್ಯೆ ಸಾಧಕನ ಸ್ವತ್ತು ಎಂಬುದನ್ನು ಅಂಗವೈಕಲ್ಯದ ನಡುವೆಯೂ ವಿದ್ಯಾರ್ಥಿಗಳು ಸಾಧಿಸಿ ತೋರಿಸಿದ್ದಾರೆ ಎಂದು ಕರವೇ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ ತಿಳಿಸಿದರು.
ನಗರದ ಅಭಿಷೇಕ್ ನೇತ್ರಧಾಮದಲ್ಲಿ ಕರವೇ (ಪ್ರವೀಣ್ ಶೆಟ್ಟಿ )ಬಣದಿಂದ ಬುಧವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅಂಗವೈಕಲ್ಯ ಮೆಟ್ಟಿನಿಂತು ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನೆಯಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟರೂ ಶಾಲಾ ಕಾಲೇಜುಗಳಿಗೆ ಹೋಗದೆ ವಿನಾ ಕಾರಣ ಸಮಯ ವ್ಯರ್ಥ ಮಾಡುವ ವಿದ್ಯಾರ್ಥಿಗಳಿಗೆ ಈ ಸಾಧಕರು ಮಾದರಿ ಎಂದರು.
ಅಭಿಷೇಕ್ ನೇತ್ರಧಾಮದ ಮುಖ್ಯಸ್ಥ ಎಂ.ಬಿ ಗುರುದೇವ್ ಮಾತನಾಡಿ, ಬಡ ಅಂಧ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಉಚಿತವಾಗಿ 1ನೇ ತರಗತಿಯಿಂದ 10ನೇ ತರಗತಿಗೆವರೆಗೆ ವಿದ್ಯಾಭ್ಯಾಸದ ಜವಾಬ್ದಾರಿ ತೆಗೆದುಕೊಳ್ಳಲಾಗುವುದು ಎಂದರು.
ಕಣ್ಣಿನ ಸಮಸ್ಯೆ ಇರುವವರಲ್ಲಿ ಬಡವರಿದ್ದರೆ ಉಚಿತವಾಗಿ ನೇತ್ರ ಶಸಚಿಕಿತ್ಸೆ ಮಾಡಿಸಿಕೊಡಲಾಗುವುದು ಎಂದು ತಿಳಿಸಿದರು.