ಬೆಂಗಳೂರು: ‘ರಾಮಾ ರಾಮಾ ರೇ’, ‘ಒಂದಲ್ಲಾ ಎರಡಲ್ಲಾ’, ‘ಮ್ಯಾನ್ ಆಫ್ ದಿ ಮ್ಯಾಚ್’ ನಿರ್ದೇಶಕ ಸತ್ಯಪ್ರಕಾಶ್ ಈಗ ನಟನೆಯತ್ತ ಮುಖ ಮಾಡಿದ್ದಾರೆ. ನಟಿಸಬೇಕು ಅಂತ ಅವರೇನೂ ನಿರ್ಧರಿಸಿಲ್ಲವಾದರೂ, ಜತೆಗಿರುವ ತಂಡ, ‘ನೀವೇ ನಟಿಸಬೇಕು’ ಎಂದು, ಕ್ಯಾಮರಾ ಹಿಂದಿದ್ದ ಅವರನ್ನು ಅದರ ಮುಂದಕ್ಕೆ ಕರೆತಂದಿದೆ. ಈ ಬಗ್ಗೆ ವಿಜಯವಾಣಿ ಜತೆ ಮಾತನಾಡುವ ಸತ್ಯ, ‘ಈ ವಿಷಯ ಕೇಳಿದ ತಕ್ಷಣ ನಿಮಗೂ ನಗು ಬರುತ್ತಲ್ವಾ? ಕ್ಯಾಮರಾ ಹಿಂದೆ ನೂರೆಂಟು ಮಂಗಾಟಗಳನ್ನು ಮಾಡುತ್ತಿದ್ದೆ. ಈಗ ಕ್ಯಾಮರಾ ಮುಂದೆ…’ ಎಂದು ನಗುತ್ತಲೇ ಹೇಳುತ್ತಾರೆ.
‘ಇದು ನನ್ನ ಜೀವನದಲ್ಲಿ ನಡೆದ ನೈಜ ಘಟನೆಗಳ ಸುತ್ತ ನಡೆಯುವ ಕಥೆ. ಹೀಗಾಗಿ ನೀವೇ ನಟಿಸಿ ಎಂದು ತಂಡದವರು ಹೇಳಿದರು. ಅದು ನಾಯಕನ ಪಾತ್ರ ಅಂತೇನಲ್ಲ. ನನ್ನ ಸಿನಿಮಾಗಳಲ್ಲಿ ಕಥೆಯೇ ನಾಯಕ, ಅದರ ಸುತ್ತ ಪ್ರಧಾನ ಪಾತ್ರಗಳು ಇರುತ್ತವೆ. ಜನವರಿಯಿಂದ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ. ನಿರ್ದೇಶನ, ನಿರ್ಮಾಣವನ್ನು ನಾನೇ ಮಾಡುತ್ತಿದ್ದೇನೆ’ ಎಂದು ಚಿತ್ರದ ಬಗ್ಗೆ ಹೇಳಿಕೊಳ್ಳುತ್ತಾರೆ.
‘ಇನ್ನೊಬ್ಬರಿಗೆ ಒಳ್ಳೆಯದಾಗಲಿ, ನನ್ನಿಂದ ಬೇರೆಯವರಿಗೆ ಕೆಟ್ಟದಾಗಬಾರದು ಎಂಬುದು ಮನುಷ್ಯನ ಮೂಲ ಗುಣ. ಆದರೆ ಆತ ಬೆಳೆದಂತೆ ಭ್ರಷ್ಟನಾಗುತ್ತಾನಷ್ಟೆ. ಈ ಚಿತ್ರದಲ್ಲು ಹಾಗೆ. ಒಬ್ಬ ಒಳ್ಳೆಯ ವ್ಯಕ್ತಿ ತನ್ನ ಕಮಿಟ್ಮೆಂಟ್ಗಳಿಂದ ಹೇಗೆ ಬದಲಾಗುತ್ತಾನೆ ಎಂಬುದರ ಸುತ್ತ ಕಥೆ ಬರೆಯುತ್ತಿದ್ದೇನೆ. ನನ್ನ ಸಿನಿಮಾಗಳ ಚಿತ್ರೀಕರಣ ಪ್ರಾರಂಭವಾಗುವುದು ತಡವಾಗುತ್ತೆ. ಆದರೆ ಪ್ರಾರಂಭವಾದ ನಾಲ್ಕೈದು ತಿಂಗಳಲ್ಲಿ ಸಿನಿಮಾ ಸಿದ್ಧ ಮಾಡಿಬಿಡುತ್ತೇವೆ. ಹೀಗಾಗಿ ಮುಂದಿನ ವರ್ಷವೇ ಸಿನಿಮಾ ಬಿಡುಗಡೆ ಮಾಡಲಿದ್ದೇವೆ’ ಎಂದು ಮತ್ತಷ್ಟು ಮಾಹಿತಿ ಹಂಚಿಕೊಳ್ಳುತ್ತಾರೆ ಸತ್ಯಪ್ರಕಾಶ್. ‘ರಾಮಾ ರಾಮಾ ರೇ’ ಚಿತ್ರದಲ್ಲಿದ್ದ ಧರ್ಮಣ್ಣ, ನಟರಾಜ್, ವಾಸುಕಿ ವೈಭವ್ ಸೇರಿದಂತೆ ಬಹುತೇಕ ಅದೇ ತಂಡ ಈ ಚಿತ್ರದಲ್ಲೂ ಇರಲಿದೆ.
ಸಿದ್ದರಾಮಯ್ಯ ಅರ್ಜಿ, ಹೈಕಮಾಂಡ್ ಮರ್ಜಿ: ಮುಂದಿನ ಚುನಾವಣೆಯಲ್ಲಿ ಸಿದ್ದು ಸ್ಪರ್ಧೆ ಎಲ್ಲಿಂದ?