ಮಂಗಳೂರು: ನಗರದ ಬೆಂದೂರ್ವೆಲ್ನಲ್ಲಿರುವ ಖಾಸಗಿ ಆಸ್ಪತ್ರೆ ಶವಾಗಾರದಲ್ಲಿ ಮೃತದೇಹದಿಂದ ನಾಪತ್ತೆಯಾಗಿದ್ದ ವಜ್ರದ ರಿಂಗನ್ನು ಕದ್ರಿ ಪೊಲೀಸರು ಪತ್ತೆ ಮಾಡಿದ್ದಾರೆ.
ಸಿಟಿ ಸೆಂಟರ್ ಮಾಲ್ನಲ್ಲಿ ಭದ್ರತಾ ವಿಭಾಗದಲ್ಲಿ ಮ್ಯಾನೇಜರ್ ಆಗಿದ್ದ ಮೂಲತಃ ಪಡೀಲ್ನ ನಿವಾಸಿ, ಪ್ರಸ್ತುತ ಬಳ್ಳಾಲ್ಬಾಗ್ನಲ್ಲಿ ವಾಸವಿದ್ದ ಹರೀಶ್ ಶೆಟ್ಟಿ(45) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದು, ಮೃತದೇಹವನ್ನು ಖಾಸಗಿ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿತ್ತು. ಈ ಸಂದರ್ಭ ಅವರ ಕಿವಿಯಲ್ಲಿದ್ದ ವಜ್ರದ ರಿಂಗ್ಗಳು ನಾಪತ್ತೆಯಾಗಿದ್ದವು.
ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ ವಿಚಾರಣೆ ನಡೆಸಿದಾಗ ರಿಂಗ್ಗಳನ್ನು ಅಲ್ಲಿನ ಭದ್ರತಾ ಸಿಬ್ಬಂದಿ ತೆಗೆದಿರುವುದು ಪತ್ತೆಯಾಗಿದ್ದು, ಕುಟುಂಬದವರಿಗೆ ಪೊಲೀಸರ ಸಮ್ಮುಖ ಹಸ್ತಾಂತರಿಸಿದ್ದಾನೆ. ಮುಂದೆ ಇಂತಹ ಕೃತ್ಯ ನಡೆಸದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
‘ಸೆಕ್ಯುರಿಟಿ ಗಾರ್ಡ್ ಮೂರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದ. ಆತನನ್ನು ಕೆಲಸದಿಂದ ವಜಾಗೊಳಿಸಿದ್ದೇವೆ’ ಎಂದು ಆಸ್ಪತ್ರೆಯ ಮ್ಯಾನೇಜರ್ ಡಾ.ಅರುಣ್ ಕುಮಾರ್ ತಿಳಿಸಿದ್ದಾರೆ.