More

    ಧೂಳಖೇಡ ಚೆಕ್‌ಪೋಸ್ಟ್‌ಗೆ ಡಿಸಿ ಭೇಟಿ

    ವಿಜಯಪುರ: ರಾಜ್ಯ ಸರ್ಕಾರದ ನಿರ್ದೇಶನದಂತೆ ‘ಏಕ ಆಗಮನ-ಏಕ ನಿರ್ಗಮನ’ ವ್ಯವಸ್ಥೆಯಡಿ ಧೂಳಖೇಡದಲ್ಲಿ ನಿರ್ಮಿಸಿದ ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಪರಿಶೀಲಿಸಿತು.
    ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಏಕ ಆಗಮನ ಏಕ ನಿರ್ಗಮನ ನಿಯಮ ಪಾಲನೆಗೆ ಧೂಳಖೇಡದಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ದಿನದ 24 ಗಂಟೆ ಚೆಕ್‌ಪೋಸ್ಟ್ ಕಾರ್ಯನಿರ್ವಹಿಸಲಿದೆ. 6 ಜನ ತಜ್ಞ ವೈದ್ಯರು, 30 ಜನ ಆರೋಗ್ಯ ಕಾರ್ಯಕರ್ತರು, ಪೊಲೀಸ್ ಇಲಾಖೆ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ, ಶಿಕ್ಷಕರು ಮತ್ತು ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಸೇವಾ ಸಿಂಧುದಲ್ಲಿ ನೋಂದಣಿ ಮಾಡದೆ ಇರುವಂತಹ ಪ್ರಯಾಣಿಕರಿಗೆ ಪ್ರತ್ಯೇಕ ಸೇವಾ ಸಿಂಧು ಆನ್‌ಲೈನ್ ಕೌಂಟರ್ ತೆರೆಯಲಾಗಿದೆ ಎಂದರು.

    ಎ ಮತ್ತು ಬಿ ವರ್ಗ

    ವಿವಿಧ ರಾಜ್ಯಗಳಿಂದ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ಆಗಮಿಸುವ ಪ್ರಯಾಣಿಕರಿಗೆ ಸಾಂಸ್ಥಿಕ ಕ್ವಾರಂಟೈನ್ ಹಾಗೂ ನಗರ ಪ್ರದೇಶದಲ್ಲಿ ಹೋಮ್ ಕ್ವಾರಂಟೈನ್‌ಗೆ ಕ್ರಮ ಕೈಗೊಂಡಿದೆ. ಕರೊನಾ ಲಕ್ಷಣವುಳ್ಳ ‘ಎ’ ವರ್ಗದವರಿಗೆ ಆಸ್ಪತ್ರೆ ಕ್ವಾರಂಟೈನ್ ಮತ್ತು ‘ಬಿ’ವರ್ಗದವರಿಗೆ ಕ್ವಾರಂಟೈನ್‌ಗೆ ಕ್ರಮ ಕೈಗೊಂಡಿದೆ. ಸರ್ಕಾರ ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಪ್ರಯಾಣಿಕರ ಮಾಹಿತಿ, ಆರೋಗ್ಯ ಸ್ಥಿತಿಗತಿ ಪರಿಶೀಲಿಸುತ್ತಿದ್ದು, ಬೇರೆ ಜಿಲ್ಲೆಗಳಿಗೆ ಪ್ರಯಾಣಿಕರನ್ನು ಕಳಿಸುವ ಸಂದರ್ಭದಲ್ಲಿ ಆಯಾ ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

    ಪೊಲೀಸ್ ಸಿಬ್ಬಂದಿ ನಿಯೋಜನೆ

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಮಾತನಾಡಿ, ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶ, ರಾಜಸ್ಥಾನ ಪ್ರಯಾಣಿಕರ ಕುರಿತು ತೀವ್ರ ನಿಗಾಕ್ಕೆ ಸುಸಜ್ಜಿತ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಡಿವೈಎಸ್‌ಪಿ, ಸಬ್ ಇನ್ಸ್‌ಪೆಕ್ಟರ್ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಿಲ್ಲೆಗೆ ಬರುವ ಮತ್ತು ಹೋಗುವ ಪ್ರಯಾಣಿಕರು, ಅನುಮತಿ ಇಲ್ಲದೆ ಹೋಗುವ ಪ್ರಯಾಣಿಕರು ಸೇರಿ ಇನ್ನಿತರ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ. ಸಿಸಿಟಿವಿ ಕ್ಯಾಮರಾಗಳ ಮೂಲಕ ತೀವ್ರ ನಿಗಾ ವಹಿಸಿದ್ದು, ಪೊಲೀಸ್ ಇಲಾಖೆಯ ವತಿಯಿಂದ ಕಟ್ಟೆಚ್ಚರ ವಹಿಸಲಾಗಿದೆ ಎಂದರು.

    ಪ್ರಯಾಣಿಕರ ಮೇಲೆ ನಿಗಾ

    ಜಿಪಂ ಸಿಇಒ ಗೋವಿಂದ ರೆಡ್ಡಿ ಮಾತನಾಡಿ, ಕರೊನಾ ಪೀಡಿತ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ. ಶ್ವಾಸಕೋಶ ತೊಂದರೆ, ಜ್ವರ, ನೆಗಡಿ, ಕೆಮ್ಮು ಇರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

    ಧೂಳಖೇಡ ಚೆಕ್‌ಪೋಸ್ಟ್‌ದಲ್ಲಿ ಜಿಲ್ಲಾಡಳಿತ ವತಿಯಿಂದ ಒಟ್ಟು 10 ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಕೌಂಟರ್‌ನಲ್ಲಿ ಓರ್ವ ಆರೋಗ್ಯ ಕಾರ್ಯಕರ್ತ ಶ್ವಾಸಕೋಶ ತೊಂದರೆ, ನೆಗಡಿ, ಕೆಮ್ಮು, ಜ್ವರಗಳ ಬಗ್ಗೆ ಪರಿಶೀಲಿಸುತ್ತಿದ್ದು, ಥರ್ಮಲ್ ಸ್ಕ್ರೀನಿಂಗ್ ಸಹ ನಡೆಸುತ್ತಿದ್ದಾರೆ. ಶಿಕ್ಷಣ ಇಲಾಖೆಯಿಂದ ಪ್ರತಿ ಕೌಂಟರ್‌ಗೆ ತಲಾ ಒಬ್ಬರು ಶಿಕ್ಷಕರನ್ನು ನೇಮಿಸಿದ್ದು, ಪ್ರಯಾಣಿಕರಿಗೆ ಅನುಬಂಧಗಳನ್ನು ಭರ್ತಿ ಮಾಡುವ ಕುರಿತಂತೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ. ಕಂದಾಯ ಇಲಾಖೆ, ಗ್ರಾಮಿಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿಯನ್ನು ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳನ್ನು ಸಹ ನೇಮಿಸಿದ್ದು, ತಜ್ಞ ವೈದ್ಯರನ್ನು ಸಹ ಆರೋಗ್ಯ ಸ್ಥಿತಿಗತಿ ಪರಿಶೀಲನೆಗೆ ನಿಯೋಜಿಸಲಾಗಿದೆ ಎಂದರು.

    ಇ-ಪಾಸ್ ಪರಿಶೀಲನೆ

    ಚೆಕ್‌ಪೋಸ್ಟ್‌ದಲ್ಲಿ ಪೊಲೀಸ್ ಸಿಬ್ಬಂದಿ ಮೂಲಕ ಇ-ಪಾಸ್ ಅಧಿಕೃತ ಕುರಿತಂತೆ ಪರಿಶೀಲನೆ ಸಹ ನಡೆಸುತ್ತಿದ್ದು, ಅನುಬಂಧಗಳಲ್ಲಿ ಪ್ರಯಾಣಿಕರ ಮಾಹಿತಿ ಪಡೆಯುವುದರ ಜತೆ ಸೀಲ್ ಸಹ ಹಾಕಲಾಗುತ್ತಿದೆ. ವಿಜಯಪುರ ಜಿಲ್ಲೆಯ ಪ್ರಯಾಣಿಕರ ಮಾಹಿತಿಯನ್ನು ಅನುಬಂಧ 1 ರಲ್ಲಿ ಪಡೆಯುವುದರ ಜತೆಗೆ ಹೋಮ್‌ಕ್ವಾರಂಟೈನ್ ಆಗುವುದರ ಕುರಿತಂತೆ ಮುಚ್ಚಳಿಕೆ ಸಹ ಪಡೆಯಲಾಗುತ್ತಿದೆ. ದಿನದ 24 ಗಂಟೆಯಲ್ಲಿ ಪ್ರತಿ 8 ಗಂಟೆಗೆ ಒಂದು ತಂಡದಂತೆ ಚೆಕ್‌ಪೋಸ್ಟ್‌ದಲ್ಲಿ ಸಿಬ್ಬಂದಿಯನ್ನು ನಿಯೋಜಿಸಿದ್ದು, ಊಟ, ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೌಂಟರ್‌ನಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಸಹ ಹಾಕಲಾಗಿದೆ. ಕಡ್ಡಾಯವಾಗಿ ಸ್ಯಾನಿಟೈಸರ್ ಬಳಕೆ, ಮಾಸ್ಕ್ ಬಳಕೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಪ್ರಯಾಣಿಕರಿಂದ ಕರ್ನಾಟಕಕ್ಕೆ ಆಗಮಿಸಿದ ದಿನ, ಪ್ರಯಾಣ ಪ್ರಾರಂಭಿಸಿದ ಸ್ಥಳ, ಅಂತಿಮವಾಗಿ ತಲುಪಬೇಕಾದ ಸ್ಥಳ, ವಿಳಾಸದ ವಿವರ, ಆರೋಗ್ಯ ಸ್ಥಿತಿಗತಿ, ಕರೊನಾ ಲಕ್ಷಣಗಳ ಬಗ್ಗೆ ಅನುಬಂಧದಲ್ಲಿ ಮಾಹಿತಿ ಪಡೆಯಲಾಗುತ್ತಿದೆ. ಆರೋಗ್ಯ ಸೇತು ಆ್ಯಪ್, ಆಪ್ತಮಿತ್ರ ಆಪ್, ಕ್ವಾರಂಟೈನ್ ವಾಚ್ ಆ್ಯಪ್‌ಗಳನ್ನು ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನಾಲ್ಕು ಚಕ್ರ ವಾಹನ, ದ್ವಿಚಕ್ರ ವಾಹನ, ಕಾಲ್ನಡಿಗೆ ಮತ್ತು ಇತರ ವಾಹನಗಳಿಂದ ಆಗಮಿಸುವ ಪ್ರಯಾಣಿಕರ ಬಗ್ಗೆ ತೀವ್ರ ನಿಗಾ ಇಡಲಾಗಿದೆ.

    ಬೃಹತ್ ಶಾಮಿಯಾನ

    ಚೆಕ್‌ಪೋಸ್ಟ್‌ದಲ್ಲಿ ಶಾಮಿಯಾನ ಹಾಕಲಾಗಿದ್ದು, ಕರೊನಾ ಸೇವಾ ಸಿಂಧು ಆನ್‌ಲೈನ್ ದಾಖಲೆ ಕೌಂಟರ್, ಅಂತರ್‌ರಾಜ್ಯ ಪ್ರತ್ಯೇಕ ಕೌಂಟರ್, ವಿಜಯಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಬಾಗಲಕೋಟೆ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗಾಗಿ ಕೌಂಟರ್ ಹಾಗೂ ಇತರ ಜಿಲ್ಲೆಗಳ ಪ್ರಯಾಣಿಕರ ಅನುಕೂಲಕ್ಕಾಗಿ 4 ಪ್ರತ್ಯೇಕ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ.
    ಇಂಡಿ ಉಪವಿಭಾಗಾಧಿಕಾರಿ ಸ್ನೇಹಲ್ ಲೋಖಂಡೆ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ್ದು, ಡಿವೈಎಸ್‌ಪಿ ಎಂ.ಬಿ. ಸಂಕದ, ಡಯಟ್ ಹಿರಿಯ ಉಪನ್ಯಾಸಕ ಲಿಮ್ಕರ್, ಚಡಚಣ ತಹಸೀಲ್ದಾರ್ ಎನ್.ಬಿ. ಗೆಜ್ಜಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಸನ್ನಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಆಲಗೂರ, ಡಾ.ಅರ್ಚನಾ ಕುಲಕರ್ಣಿ ಮತ್ತಿತರರು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts