ಸಿಂಧನೂರು: ಧರ್ಮ ರಕ್ಷಣೆ ಮಾಡುವವರನ್ನು ಧರ್ಮ ರಕ್ಷಿಸುತ್ತದೆ. ಧರ್ಮದೊಂದಿಗೆ ಎಲ್ಲರೂ ಕೈಜೋಡಿಸಬೇಕೆಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಕೆ.ಬಸಾಪುರ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ಅಡ್ಡಪಲ್ಲಕ್ಕಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸೋಮವಾರ ಆಶೀರ್ವಚನ ನೀಡಿದರು. ಧರ್ಮದ ಮಾರ್ಗದಲ್ಲಿ ಸಾಗುವವರ ದಾರಿ ಸುಗಮವಾಗಿರುತ್ತದೆ. ಕಷ್ಟದಲ್ಲಿ ಎಲ್ಲರೂ ಕೈಬಿಟ್ಟರೂ ಧರ್ಮ ಎಂದಿಗೂ ಕೈಬಿಡುವದಿಲ್ಲ. ಧರ್ಮ ಸುಭೀಕ್ಷೆಯಿಂದಿದ್ದರೆ ಜಗತ್ತಿನಲ್ಲಿ ಪ್ರಶಾಂತ ವಾತಾವರಣ ನಿರ್ಮಾಣವಾಗಲಿದೆ. ಎಲ್ಲರೂ ಒಗ್ಗಟ್ಟಿನಿಂದ, ಪ್ರೀತಿ-ವಿಶ್ವಾಸದಿಂದ ಬದುಕು ಸಾಗಿಸಬೇಕು. ಸಾಮರಸ್ಯದ ಬದುಕಿನಿಂದ ಜೀವನದಲ್ಲಿ ಸಂತಸ ಹೊಂದಲು ಸಾಧ್ಯ. ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು. ಆರೋಗ್ಯವೇ ನಿಜವಾದ ಭಾಗ್ಯವಾಗಿದೆ ಎಂದರು.