ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ ಅರ್ಚಕ-ಪುರೋಹಿತರ ಪರಿಷತ್ ಲೋಕಕಲ್ಯಾಣಕ್ಕಾಗಿ ನಿರಂತರವಾಗಿ ಧರ್ಮ ಕಾರ್ಯಗಳನ್ನು ಮಾಡುತ್ತಿದೆ ಎಂದು ಪರಿಷತ್ನ ಜಿಲ್ಲಾಧ್ಯಕ್ಷ ಮಾರ್ಕಾಂಡೇಯ ಭಟ್ ಹೇಳಿದರು.
ಪಟ್ಟಣದ ಇಟ್ಟಿಗೆ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಎನ್.ಆರ್.ಪುರ ತಾಲೂಕು ಅರ್ಚಕ, ಪುರೋಹಿತರ ಪರಿಷತ್ ಶುಕ್ರವಾರ ಆಯೋಜಿಸಿದ್ದ ಶ್ರೀ ಮನ್ಯುಸೂಕ್ತ ಹೋಮ ಹಾಗೂ ಅನುಷ್ಠಾನ, ಪರಿಷತ್ನ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಅರ್ಚಕ, ಪುರೋಹಿತರ ಪರಿಷತ್ ಕಾರ್ಯನಿರ್ವಹಿಸುತ್ತಿದೆ. ಸುಮಾರು 700ಕ್ಕೂ ಅಧಿಕ ಸದಸ್ಯರು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಸದಸ್ಯರು ಹಾಗೂ ಪರಿಷತ್ ಸನಾತನ ಧರ್ಮದ ರಕ್ಷಣೆಗಾಗಿ ಶ್ರಮವಹಿಸಿ ಧರ್ಮ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.
ನಮ್ಮ ದೇಶ, ರಾಜ್ಯ, ಊರಿಗೆ ಒಳ್ಳೆಯದಾಗಬೇಕು ಎಂಬ ಉದ್ದೇಶದಿಂದ ಪ್ರತಿ ವರ್ಷ ಜಪ, ಅನುಷ್ಠಾನ ಮಾಡಲಾಗುತ್ತಿದೆ. ಯಾವುದೇ ವಿಧದಲ್ಲಿ ಸನಾತನ ಧರ್ಮವನ್ನು ವಿರೋಧ ಮಾಡುವವರಿಗೂ ಸಹ ಭಗವಂತ ಸದ್ಬುದ್ಧಿಯನ್ನು ಕರುಣಿಸಲಿ. ಸನಾತನ ಹಿಂದು ಧರ್ಮದ ರಕ್ಷಣೆಗಾಗಿ ಪ್ರತಿಯೊಬ್ಬರೂ ಸಹಕಾರ ನೀಡಲಿ ಎಂಬುದು ನಮ್ಮ ಆಶಯವಾ ಎಂದರು.
ಎನ್.ಆರ್.ಪುರ ತಾಲೂಕು ಘಟಕದ ಅಧ್ಯಕ್ಷ ಖಾಂಡ್ಯ ಕೇಶವಮೂರ್ತಿ ಭಟ್, ಪರಿಷತ್ನ ಜಿಲ್ಲಾ ಖಜಾಂಚಿ ವಿಶ್ವನಾಥ ಭಟ್, ತಾಲೂಕು ಕಾರ್ಯದರ್ಶಿ ಎಸ್.ಪಿ.ಶ್ರೀನಿವಾಸಮೂರ್ತಿ, ಲಕ್ಷ್ಮೀನಾರಾಯಣ ದೇವಸ್ಥಾನದ ಮುಖ್ಯಸ್ಥ ಗುರುರಾಜ ಕಾರಂತ್, ಜಿಲ್ಲಾ ಕಾರ್ಯದರ್ಶಿ ಮುರಳೀಕೃಷ್ಣ ಭಟ್ ಇತರರಿದ್ದರು.