ಯಲಬುರ್ಗಾ: ಈ ಹಿಂದೆ 2017ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಸವರಾಜ ರಾಯರಡ್ಡಿ ಶಂಕುಸ್ಥಾಪನೆ ಮಾಡಿದ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ಶಾಸಕ ಹಾಲಪ್ಪ ಆಚಾರ್ ಮರು ಶಂಕುಸ್ಥಾಪನೆ ಮಾಡುತ್ತಿರುವುದು ಸಮಂಜವಲ್ಲ ಎಂದು ಪಪಂ ಸದಸ್ಯೆ ಡಾ.ನಂದಿತಾ ದಾನರಡ್ಡಿ ಆರೋಪಿಸಿದರು.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಲಬುರ್ಗಾದ ಕೆಂಪು ಕೆರೆ ಅಭಿವೃದ್ಧಿಗಾಗಿ ಸ್ಥಳೀಯ ಪಪಂನ ಅನುದಾನದಡಿಯಲ್ಲಿ 1.70 ಕೋಟಿ ರೂ. ವೆಚ್ಚದ ಕಾಮಗಾರಿಗೆ ಮಾಜಿ ಸಚಿವ ರಾಯರಡ್ಡಿ ಕಾಮಗಾರಿಗೆ ಚಾಲನೆ ನೀಡಿದ್ದರು.
ಅದೇ ಕಾಮಗಾರಿಗೆ ಎರಡು ವರ್ಷದ ನಂತರ ಮತ್ತೆ ಶಂಕುಸ್ಥಾಪನೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲಿ. ಪಕ್ಷಬೇಧ ಮರೆತು ಪಟ್ಟಣದ 15 ವಾರ್ಡ್ಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಜಯಶ್ರೀ ಕಂದಕೂರು, ಪಪಂ ಮಾಜಿ ಅಧ್ಯಕ್ಷೆ ಜಯಶ್ರೀ ಶರಣಪ್ಪ ಅರಕೇರಿ, ಶರಣಮ್ಮ ಪೂಜಾರ್, ಪಪಂ ಸದಸ್ಯರಾದ ರೇವಣೆಪ್ಪ ಹಿರೇಕುರುಬರ್, ರಿಯಾಜ್ಅಹ್ಮದ್ ಖಾಜಿ, ಪ್ರಮುಖರಾದ ಆನಂದ ಉಳ್ಳಾಗಡ್ಡಿ, ಛತ್ರಪ್ಪ ಛಲವಾದಿ, ಶರಣಪ್ಪ ಗಾಂಜಿ, ಸುಧೀರ ಕೊರ್ಲಳ್ಳಿ ಇನ್ನಿತರರಿದ್ದರು.