ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಇನ್ನು ಮುಂದೆ ಯಾವತ್ತೂ ಎಲೆಕ್ಷನ್ಗೆ ನಿಲ್ಲಲೇಬಾರದು ಅಂತ ಮನಸ್ಸು ಗಟ್ಟಿ ಮಾಡಿಕೊಂಡಿದ್ದೆ. ಆದರೆ ಪಕ್ಷದ ಕಾರ್ಯಕರ್ತರು, ಇತರ ಪಕ್ಷಗಳ ನಾಯಕರು ಒತ್ತಾಯ ಮಾಡಿದ್ದರಿಂದಾಗಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಬೇಕಾಯಿತು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘‘ಕಳೆದ ಬಾರಿ ಚುನಾವಣೆಯಲ್ಲಿ ನಾನು ಸೋತಿದ್ದು ವಿಧಿಯಾಟದಿಂದ. ಈ ಸಲ ನಿಲ್ಲಬಾರದು ಎಂದುಕೊಂಡಿದ್ದರೂ ಸೋನಿಯಾ ಗಾಂಧಿ ಫೋನ್ ಮಾಡಿದರು, ಅದಲ್ಲದೆ ಕಾಂಗ್ರೆಸ್ನಿಂದ ಒಬ್ಬರದೇ ಹೆಸರನ್ನು ಘೋಷಿಸಿದರು. ರಾಹುಲ್ ಗಾಂಧಿ ಅವರ ಜತೆಗೂ ಮಾತನಾಡಿದೆ. ನೀವು ಒಂದೇ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೀರಿ. ನಾನೂ ನಾಮಪತ್ರ ಹಾಕುತ್ತೇನೆ ಅಂತ ಹೇಳಿದೆ’’ ಎಂದು ಹೇಳಿದರು.
ಇದನ್ನೂ ಓದಿ 29ಕ್ಕೆ ವಿಧಾನ ಪರಿಷತ್ನ 7 ಸ್ಥಾನಗಳಿಗೆ ಚುನಾವಣೆ: ವೇಳಾಪಟ್ಟಿ ಪ್ರಕಟ
‘‘ನಮ್ಮ ಪಕ್ಷದ ಕಾರ್ಯಕರ್ತರೂ ನಾನೇ ನಿಲ್ಲಬೇಕು ಅಂತ ಒತ್ತಾಯಿಸಿದರು. ಇದರಲ್ಲಿ ಕುಮಾರಸ್ವಾಮಿ, ರೇವಣ್ಣ ಅವರ ಒತ್ತಡ ಇಲ್ಲ. ನನಗೆ ವಯಸ್ಸಾಯ್ತು ನೀನೆ ನಿಂತುಕೋ ಅಂತ ಕುಮಾರಸ್ವಾಮಿಗೆ ಹೇಳಿದ್ದೆ. ನಾನು ಅವಿರೋಧವಾಗಿ ಆಯ್ಕೆಯಾಗಲು ಬಿಜೆಪಿ ಸಹಕಾರವೂ ಇದೆ. ಎರಡೂ ರಾಷ್ಟ್ರೀಯ ಪಕ್ಷಗಳು ಹೆಚ್ಚುವರಿ ಅಭ್ಯರ್ಥಿಯನ್ನು ಹಾಕಲಿಲ್ಲ. ಬಿಜೆಪಿಯವರ್ಯಾರನ್ನೂ ನಾನು ಭೇಟಿ ಮಾಡಿಲ್ಲ’’ ಎಂದು ಹೇಳಿದರು.
‘‘ಕಾಂಗ್ರೆಸ್ನ ರಾಜ್ಯ ನಾಯಕರಿಗೆ ನಾನು ಶತ್ರು ಅಲ್ಲ. ಕಾಂಗ್ರೆಸ್ ನಾಯಕ ವೇಣುಗೋಪಾಲ್ ಕೂಡ ಕುಮಾರಸ್ವಾಮಿಗೆ ಫೋನ್ ಮಾಡಿದ್ದರು. ಮಾಜಿ ಸಚಿವ ಅರವಿಂದ ಲಿಂವಾವಳಿ ಕೂಡ ತಮ್ಮ ಪಕ್ಷ ಮೂರನೆ ಅಭ್ಯರ್ಥಿ ಹಾಕಲ್ಲ ಅಂತ ಸ್ಪಷ್ಟಪಡಿಸಿದ್ದರು’’ ಎಂದು ತಾವು ಸ್ಪರ್ಧಿಸಿದ್ದಕ್ಕೆ ಹಿನ್ನೆಲೆಯನ್ನು ವಿವರಿಸಿದರು.
ಇದನ್ನೂ ಓದಿ ಇಲ್ನೋಡಿ, ಒಂದೇ ಕುಟುಂಬದ 15 ಜನರಿಗೂ ವಕ್ಕರಿಸಿದೆ ಕರೊನಾ ಹೆಮ್ಮಾರಿ!
‘‘ರಾಜ್ಯಸಭೆಯಲ್ಲಿ ಮಾತನಾಡಲು ಎರಡು ಮೂರು ನಿಮಿಷ ಅಷ್ಟೆ ಅವಕಾಶ ಸಿಗುತ್ತೆ. ಜನರ ಸಮಸ್ಯೆ ಕೈಗೆತ್ತಿಕೊಂಡು ಹೋರಾಟ ಮಾಡುವಾಗ ಯಾರ ದಾಕ್ಷಿಣ್ಯಕ್ಕೂ ಒಳಗಾಗಲ್ಲ. ಅಗತ್ಯ ಬಿದ್ದರೆ ನಿಯೋಗ ಕರೆದುಕೊಂಡು ಹೋಗಲು ಕ್ರಮ ತೆಗೆದುಕೊಳ್ಳುತ್ತೇನೆ. ನನ್ನ ಜೀವನದಲ್ಲಿ ಇದು ಕೊನೆಯ ರಾಜಕೀಯ ಹೋರಾಟವೋ ಏನೊ ಗೊತ್ತಿಲ್ಲ’’ ಎಂದರು.
https://www.vijayavani.net/quarantine-rules-again-change-new-guidelines-for-corona-examination/