*ಗಬ್ಬೂರಿನಲ್ಲಿ ನಾಡ ತಹಸೀಲ್ದಾರ್ಗೆ ಮನವಿ
ದೇವದುರ್ಗ: ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಕುರುಬ ಸಮುದಾಯವನ್ನು ಎಸ್ಟಿ ಮೀಸಲಿಗೆ ಸೇರಿಸುವಂತೆ ಒತ್ತಾಯಿಸಿ ಗಬ್ಬೂರಿನಲ್ಲಿ ನಾಡ ತಹಸೀಲ್ದಾರ್ಗೆ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಮುಖಂಡರು ಶನಿವಾರ ಮನವಿ ಸಲ್ಲಿಸಿದರು.
ಕುರುಬ ಸಮುದಾಯ ರಾಜ್ಯದ ಎಲ್ಲ ಜಿಲ್ಲೆಯಲ್ಲಿ ವಾಸವಿದ್ದು, ಅಷ್ಟೇನು ಅಭಿವೃದ್ಧಿ ಹೊಂದಿಲ್ಲ. ಇನ್ನೂ ಹಲವು ಕುಟುಂಬಗಳು ಕುಲ ಕಸಬು ಮಾಡುತ್ತ, ಗುಡ್ಡಗಾಡು, ಕಾಡಿನಲ್ಲಿ ವಾಸವಿದ್ದಾರೆ. ಸಮುದಾಯಕ್ಕೆ ಸಿಗಬೇಕಾದ ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ. ಇದರಿಂದ ಸಮುದಾಯದ ಜನರು ಇನ್ನೂ ಕೂಡ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಸಮುದಾಯವನ್ನು ಎಸ್ಟಿಗೆ ಸೇರಿಸಲು ಒತ್ತಾಯಿಸಿ ಸರ್ಕಾರಕ್ಕೆ ಹಲವು ಸಲ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಕೂಡಲೇ ಕುರುಬ ಸಮುದಾಯವನ್ನು ಎಸ್ಟಿ ಮೀಸಲು ವರ್ಗಕ್ಕೆ ಸೇರಿಸುವ ಮೂಲಕ ಸೂಕ್ತ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಸಿದ್ದಯ್ಯತಾತ ಗುರುವಿನ್, ಮೂಕಯ್ಯ ತಾತ ಗುರುವಿನ್, ಸೂಗೂರೆಡ್ಡಿ, ಗುರಪಾದ, ಲಿಂಗರಾಜ, ಹಂಪನಗೌಡ, ಗಂಗಪ್ಪ, ನಾಗರಾಜ ಖಾನಾಪುರ, ನಿಂಗಯ್ಯ ಬೊಮ್ಮನಾಳ, ಮಾಳಿಂಗರಾಯ, ಹನುಮಂತ ಇದ್ದರು.