ತಹಸೀಲ್ದಾರ್ ಮಧುರಾಜ್ ಯಾಳಗಿಗೆ ಮನವಿ ಸಲ್ಲಿಕೆ
ದೇವದುರ್ಗ: ಲಾಕ್ಡೌನ್ ಜಾರಿಗೊಳಿಸಿದ್ದರಿಂದ ಶಾಲಾ ಕಾಲೇಜುಗಳು ಅವಧಿಗೆ ಮುನ್ನವೇ ಬಂದ್ ಆಗಿವೆ. ಹೀಗಾಗಿ ಖಾಸಗಿ ಕಾಲೇಜು ಉಪನ್ಯಾಸಕರು ಸಂಕಷ್ಟ ಎದುರಿಸುತ್ತಿದ್ದು, ಆರ್ಥಿಕ ಸಹಾಯ ನೀಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಮಧುರಾಜ್ ಯಾಳಗಿಗೆ ಖಾಸಗಿ ಕಾಲೇಜುಗಳ ಉಪನ್ಯಾಸಕರ ಸಂಘ ಬುಧವಾರ ಮನವಿ ಸಲ್ಲಿಸಿತು.
ರಾಜ್ಯದಲ್ಲಿ ಮಾರ್ಚ್ನಿಂದ ಶಾಲಾ ಕಾಲೇಜು ಬಂದ್ ಮಾಡಿದ್ದು, ವಿವಿಧ ಕಾಲೇಜಿನಲ್ಲಿ ಬೋಧನೆ ಮಾಡಿ ಜೀವನ ನಡೆಸುತ್ತಿದ್ದ ಉಪನ್ಯಾಸಕರು ತೊಂದರೆ ಅನುಭವಿಸುವಂತಾಗಿದೆ. ತೊಂದರೆಯಲ್ಲಿರುವವರಿಗೆ ರಾಜ್ಯ ಸರ್ಕಾರ ಇತ್ತೀಚೆಗೆ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ, ಅತಿಥಿ ಶಿಕ್ಷಕರಿಗೆ ಯಾವುದೇ ಸಹಾಯ ಮಾಡದೇ ಇರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಎಲ್ಲ ಖಾಸಗಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ, ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷ ವಿನೋದ ಕೆ.ನಾಯಕ, ಪ್ರಧಾನ ಕಾರ್ಯದರ್ಶಿ ರಮೇಶ ರಾಮನಾಳ್, ಮುಖಂಡರಾದ ರಮೇಶ ಭಜಂತ್ರಿ, ಎಚ್.ಡಿ. ಶಿವರಾಜ, ರಮೇಶ ಗವಿ, ಶಿವಪ್ರಸಾದ್, ಮುನಿಯಪ್ಪ, ಶುಭಾಷ್ ಚಂದ್ರ, ಅಮರೇಶ, ಗೋವಿಂದ, ಆದೇಶ, ಪ್ರಭಣ್ಣಗೌಡ, ಶಶಿಧರ ಅಕ್ಕರಕಿ, ಅಕ್ಕಮಹಾದೇವಿ, ಶಿವಕುಮಾರ ಇದ್ದರು.