ನವದೆಹಲಿ: ಆತನಿದ್ದದ್ದು ದೂರದ ಮುಂಬೈನಲ್ಲಿ. ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಆತನಿಗೆ ಊರಿಗೆ ಹೋಗಬೇಕೆಂಬ ಹಂಬಲ. ಮನೆಯೋ ಉತ್ತರಪ್ರದೇಶದ ಅಲಹಾಬಾದ್ ಸಮೀಪದ ಊರಿನಲ್ಲಿದೆ. ಹೇಗೆ ತೆರಳಬೇಕೆಂದು ಯೋಚಿಸುತ್ತಿದ್ದಾಗ ಅದೊಂದು ಐಡಿಯಾ ಹೊಳೆದಿದೆ.
ಅಲಹಾಬಾದ್ನ ಪ್ರೇಮ್ ಮೂರ್ತಿ ಪಾಂಡೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕೆಲಸಗಾರ. ಮುಂಬೈನ ಆಜಾದ್ನಗರದ ಇಕ್ಕಟ್ಟಾದ ಪ್ರದೇಶದಲ್ಲಿ ನೆಲೆಸಿದ್ದ. ಲಾಕ್ಡೌನ್ ಘೋಷಿಸಿದ ಮೊದಲ ಅವಧಿಯನ್ನು ಹೇಗೋ ಅಲ್ಲಿಯೇ ಕಳೆದ. ಎರಡನೇ ಬಾರಿ ವಿಸ್ತರಣೆಯಾದಾಗ ಆತನಲ್ಲಿ ಮನೆಗೆ ಹೋಗಬೇಕೆಂದು ತೀವ್ರ ಹಂಬಲ ಉಂಟಾಗಿದೆ. ಇದಕ್ಕೊಂದು ದಾರಿಯಿದೆ ಹೊಳೆದಿದೆ. ಪ್ರಸ್ತುತ ಸರ್ಕಾರ ಅಗತ್ಯ ವಸ್ತುಗಳ ಸಾಗಣೆಗೆ ವಾಹನಗಳ ಸಂಚಾರಕ್ಕೆ ಅನುಮತಿ ನೀಡುತ್ತದೆ. ಇದನ್ನೇ ಬಳಸಿಕೊಳ್ಳೋಣ ಎಂದು ಉಪಾಯ ಮಾಡಿದ್ದಾನೆ.
ಮುಂಬೈನಲ್ಲಿ ಮಿನಿ ಟ್ರಕ್ವೊಂದನ್ನು ಬಾಡಿಗೆಗೆ ಪಡೆದ ಪ್ರೇಮ್, ಅದನ್ನು ನಾಸಿಕ್ ಸಮೀಪದ ಪಿಂಪಲ್ಗಾಂವ್ಗೆ ಕೊಂಡೊಯ್ದು, 10 ಸಾವಿರ ರೂ.ಗಳಿಗೆ 1,300 ಕೆಜಿ ಕಲ್ಲಂಗಡಿ ಹಣ್ಣು ಖರೀದಿಸಿದ್ದಾನೆ. ಅದಕ್ಕಾಗಲೇ ಮುಂಬೈನಲ್ಲಿ ಗಿರಾಕಿಯನ್ನು ಹುಡುಕಿಕೊಂಡು ಮಿನಿ ಟ್ರಕ್ಅನ್ನು ಮುಂಬೈಗೆ ವಾಪಸ್ ಕಳುಹಿಸಿದ್ದಾನೆ. ಪಿಂಪಲ್ಗಾಂವ್ನಲ್ಲಿ 9.10 ರೂ.ಗೆ ಕೆಜಿಯಂತೆ 2.32 ಲಕ್ಷ ರೂ. ನೀಡಿ 25 ಸಾವಿರ ಕೆಜಿ ಈರುಳ್ಳಿ ಖರೀದಿಸಿದ್ದಾನೆ. ಬಳಿಕ 77,500 ರೂ.ಗೆ ಲಾರಿಯನ್ನು ಬಾಡಿಗೆಗೆ ಪಡೆದು ಈರುಳ್ಳಿ ಸಮೇತ 1,200 ಕಿ.ಮೀ. ದೂರದ ಅಲಹಾಬಾದ್ಗೆ ಪ್ರಯಾಣ ಬೆಳೆಸಿದ್ದಾನೆ.
ಅಲಹಾಬಾದ್ ಹೊರವಲಯದ ಮುಂಡೇರಾ ಮಾರುಕಟ್ಟೆಗೆ ಲಾರಿಯನ್ನು ಕೊಂಡೊಯ್ದಿದ್ದಾನೆ. ಆದರೆ, ಅಲ್ಲಿ ನಗದು ನೀಡಿ ಈರುಳ್ಳಿ ಖರೀದಿಸುವವರೇ ಇರಲಿಲ್ಲ. ಹೀಗಾಗಿ ಈರುಳ್ಳಿಯನ್ನು ತನ್ನೂರಿಗೆ ಕೊಂಡೊಯ್ದಿದ್ದಾನೆ. ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಬಂದ ಬಳಿಕ ಮಾರುವ ಯೋಚನೆಯಲ್ಲಿದ್ದಾನೆ. ಈ ನಡುವೆ ಆತನನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಕ್ವಾರಂಟೈನ್ನಲ್ಲಿರುವಂತೆ ಪೊಲೀಸರು ಸೂಚಿಸಿದ್ದಾರೆ.
ಲಾಕ್ಡೌನ್ ನಡುವೆಯೂ ಇಬ್ಬರು ನ್ಯಾಯಮೂರ್ತಿಗಳು 2,000 ಕಿ.ಮೀ. ಗೂ ಹೆಚ್ಚು ಪ್ರಯಾಣಿಸಿದ್ದೇಕೆ?