ಕಳಸ: ಇಲ್ಲಿನ ಕುಂಬಳಡಿಕೆ ಸರ್ವೆ ನಂ. 153ರಲ್ಲಿ ಅತಿವೃಷ್ಟಿ ಸಂತ್ರಸ್ತರಿಗೆ ಮೀಸಲಿಟ್ಟ ಭೂಮಿಯಲ್ಲಿ ಟೆಂಟ್ ಹಾಕಿದ್ದ ನಿವೇಶನ ರಹಿತರ ಮನವೊಲಿಸಿದ್ದು, ನಿವೇಶನ ಹಂಚಿಕೆ ಮಾಡುವುದಾಗಿ ಭರವಸೆ ನೀಡಲಾಗಿದೆ.
ಅತಿವೃಷ್ಟಿ ಸಂತ್ರಸ್ತರಿಗೆ ನಿವೇಶನ ಗೊತ್ತು ಪಡಿಸಿದಾಗ, ಹಲವು ವರ್ಷಗಳಿಂದ ನಿವೇಶನ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದ 87 ಕುಟುಂಬಗಳು ಅದೇ ಭೂಮಿಯಲ್ಲಿ ಜ.23ರಂದು ಟೆಂಟ್ ಹಾಕಿ ಇಲ್ಲಿಯೇ ನಮಗೂ ನಿವೇಶನ ನೀಡಬೇಕು ಎಂದು ಆಗ್ರಹಿಸಿದ್ದರು.
ಸಮಸ್ಯೆ ಜಟಿಲವಾಗುತ್ತಿದ್ದಂತೆ ಜಿಲ್ಲಾಡಳಿತಕ್ಕೆ ನಿರಾಶ್ರಿತರಿಗೆ ನಿವೇಶನ ಹಂಚಲು ವಿಳಂಬವಾಗಿತ್ತು. ಈ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದ ಜಿಲ್ಲಾಧಿಕಾರಿ ಕೂಡಲೇ ಸ್ಥಳ ತೆರವು ಮಾಡಿ ಬಡಾವಣೆ ನಿರ್ವಣದ ಪ್ರಕ್ರಿಯೆ ಪೂರ್ಣಗೊಳಿಸಿಯೇ ಕಚೇರಿಗೆ ವಾಪಸಾಗಬೇಕು ಎಂದು ಅಧಿಕಾರಿಗಳಿಗೆ ಗುರುವಾರ ಆದೇಶಿಸಿದ್ದರು.
ಇದರಂತೆ ಶುಕ್ರವಾರ ಬೆಳಗ್ಗೆಯೇ ಶಾಸಕ ಎಂ.ಪಿ.ಕುಮಾರಸ್ವಾಮಿ, ತಹಸೀಲ್ದಾರ್ ರಮೇಶ್, ಇಒ ವೆಂಕಟೇಶ್, ಸ್ಥಳೀಯ ಅಧಿಕಾರಿಗಳು, 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಗುಡಿಸಲು ತೆರವು ಮಾಡುವಂತೆ ಕುಟುಂಬಗಳಿಗೆ ಸೂಚಿಸಿದರು.
ನೂರಕ್ಕೂ ಹೆಚ್ಚು ನಿವೇಶನ ರಹಿತರು ನಾವು ಯಾವುದೇ ಕಾರಣಕ್ಕೂ ಇಲ್ಲಿಂದ ಖಾಲಿ ಮಾಡುವ ಪ್ರಶ್ನೆಯೇ ಇಲ್ಲ. ಕಳೆದ ವರ್ಷ ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ನಿವೇಶನ ಕೊಡಲು ಭೂಮಿ ಇದೆ. ಆದರೆ 30 ವರ್ಷಗಳಿಂದ ನಿವೇಶನ ಇಲ್ಲದ ಬಡವರಿಗೆ ಇಲ್ಲವೇ? ನಿವೇಶನ ರಹಿತರನ್ನು ಒಕ್ಕಲೆಬ್ಬಿಸುವ ಯೋಚನೆ ಹೊರತು, ಬಡವನಿಗೂ ನಿವೇಶನ ಕೊಡಬೇಕು ಎನ್ನುವ ಮನಸ್ಥಿತಿ ನಿಮಗಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.