ಬೆಂಗಳೂರು:
ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಅವಹೇಳನಕಾರಿ ಪೋಸ್ಟರ್ ಮಾಡಿರುವುದನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್, ಪ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿತು.
ಕಾಂಗ್ರೆಸ್ ನಾಯಕರಾದ ರಾಹುಲ್ ಅವರ ಬಗ್ಗೆ ಭಯಭೀತಗೊಂಡಿರುವ ಬಿಜೆಪಿ, ರಾವಣನಿಗೆ ಹೋಲಿಕೆ ಮಾಡಿ ಪೋಸ್ಟ್ರರ್ಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವುದು ಬಿಜೆಪಿ ಪಕ್ಷದ ಕೀಳುಮಟ್ಟದ ರಾಜಕಾರಣವಾಗಿದೆ ಎಂದು ಪ್ರತಿಭಟನಾನಿರತರು ಭಿತ್ತಿಪತ್ರ ಹಿಡಿದು, ದಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ರಾವಣನಿಗೆ ಹೋಲಿಸಿ ಭಾರತ ಅಪಾಯದಲ್ಲಿದೆ ಎಂಬ ಶೀರ್ಷಿಕೆ ಹಾಕಿರುವುದರ ಹಿಂದೆ ದುಷ್ಟತನ ಅಡಗಿದೆ. ಭಾರತ್ ಜೋಡೋ ಯಾತ್ರೆ ಬಳಿಕ ಬಿಜೆಪಿಯಲ್ಲಿ ರಾಹುಲ್ ಬಗ್ಗೆ ಭಯ ಹುಟ್ಟಿಕೊಂಡಿದ್ದು, ಏನೇನೋ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿಯವರು ಹತಾಶರಾಗಿ ರಾಹುಲ್ಗಾಂಧಿಯನ್ನು ರಾವಣನಿಗೆ ಹೋಲಿಕೆ ಮಾಡುವ ಹೀನ ಕೃತ್ಯಕ್ಕೆ ಇಳಿದಿದ್ದಾರೆ. ರಾಜ್ಯದಲ್ಲಿ 7 ಜನ ಇದ್ದಾರೆ. ಅವರಿಗೆ ಬೆಳ್ಳಿಗೆ ಎದ್ದರೆ ಇದೇ ಕೆಲಸವಾಗಿದೆ ಎಂದರು.
ಹಿಟ್ಲರ್ ಜರ್ಮನಿ ಆಳಬೇಕಾದರೆ ಈ ರೀತಿಯ ನೀತಿ ಅನುಸರಿಸುತ್ತಿದ್ದ. ಬಿಜೆಪಿ ಅದೇ ಹಾದಿಯಲ್ಲಿ ಸಾಗಿದೆ. ದುರ್ಯೋದನ, ಶಕುನಿಗಳು ಬಿಜೆಪಿಯಲಿದ್ದಾರೆ. ಸುಳ್ಳೇ ಅವರ ವ್ಯಾಟ್ಸಪ್ ವಿಶ್ವವಿದ್ಯಾಲಯ. ಹೆಡ್ ಆಫೀಸ್ ಮಾತ್ರ ನಾಗಪುರದಲ್ಲಿದೆ. ಆದರೆ, ಕುಲಪತಿಗಳು ಯಾರಿದ್ದಾರೊ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಎಲ್ಲವನ್ನ ಜನ ನೋಡುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಬುದ್ದಿ ಕಲಿಸಲಿದ್ದಾರೆ. ಸತ್ಯಹರಿಶ್ಚಂದ್ರ ರೀತಿ ಮಾತನಾಡುವ ಬಿಜೆಪಿಗೆ ನ್ಯಾಯ ನೀತಿ ಧರ್ಮ ಏನು ಇಲ್ಲ. ರಾಜ್ಯದಲ್ಲಿ ಜನ ಬುದ್ದಿ ಕಲಿಸಿದರೂ ಅವರು ಎಚ್ಚೆತ್ತುಕೊಂಡಿಲ್ಲ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಮುಖಂಡರಾದ ಜಿ.ಕೃಷ್ಣಪ್ಪ, ಶೇಖರ್ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
*ಧರ್ಮ ಮಾರ್ಗದ ಹಾದಿಯಲ್ಲಿ ನಡೆಯುತ್ತಿರುವ ರಾಹುಲ್ ಗಾಂಧಿಗೆ ಸೋಲಿಲ್ಲ. 5 ರಾಜ್ಯಗಳಲ್ಲಿ ಚುನಾವಣೆ ಇದೆ. ಅಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ. ರಾಹುಲ್ ಜನ ಮನ್ನಣೆ ಸಹಿಸಲಾಗದೇ ಈ ಕುತಂತ್ರಕ್ಕೆ ಕೈ ಹಾಕಿದ್ದಾರೆ. ಅಧಿಕಾರಕ್ಕೆ ಬಂದು 9 ವರ್ಷ ಆಗಿದ್ದರೂ ಬಿಜೆಪಿ
ಯಾವುದೇ ಜನಪರ ಕೆಲಸ ಮಾಡಲಿಲ್ಲ.
-ಎಚ್.ಎಂ.ರೇವಣ್ಣ, ಮಾಜಿ ಸಚಿವ
*28 ಪಕ್ಷಗಳು ಸೇರಿ ಒಕ್ಕೂಟ ಆಗಿದೆ. ಅದಕ್ಕೆ ಬಿಜೆಪಿಗೆ ಭಯ ಬಂದಿದೆ. ಇದೆಲ್ಲ ನೋಡಿದರೆ, ಮೊಹಮ್ಮದ್ ಬಿನ್ ತುಘಲಕ್ ಆಡಳಿತ ನೆನಪಾಗುತ್ತೆ. ಎಷ್ಟು ದಿನ ಜಾತಿ ರಾಜಕೀಯ ಮಾಡ್ತೀರಾ ಸ್ವಾಮಿ? ಸಂಸತ್ತಿನಲ್ಲಿ ರಾಹುಲ್ ಗಾಂಧಿ ಪ್ರಶ್ನೆಗೆ ಉತ್ತರ ಕೊಡದವರು ಹೀನ ಕೃತ್ಯಕ್ಕೆ ಇಳಿದಿದ್ದೇಕೆ?
-ನಾಗರಾಜ ಯಾದವ್, ವಿಧಾನ ಪರಿಷತ್ ಸದಸ್ಯ