ಮೊಳಕಾಲ್ಮೂರು: ತಾಲೂಕಿನ ಹಾನಗಲ್ ಸಮೀಪ ಅಂದಾಜು ೧.೭೫ ಕೋಟಿ ರೂ. ಮೊತ್ತದಲ್ಲಿ ಬುದ್ಧಿಮಾಂದ್ಯ ಮಕ್ಕಳ ಆರೈಕೆ ಮತ್ತು ಶಿಕ್ಷಣ ಕೇಂದ್ರ ಸ್ಥಾಪಿಸುವ ಉದ್ದೇಶ ಇದೆ ಎಂದು ನಮ್ಮ ಆಶ್ರಮದ ಮುಖ್ಯಸ್ಥ, ಸಾಹಿತಿ ಶ್ರೀನಿವಾಸಮೂರ್ತಿ ಹೇಳಿದರು.
ಪಟ್ಟಣದ ಸ್ವಕುಳಸಾಳಿ ಗುರುಪೀಠದ ಸಮುದಾಯ ಭವನದಲ್ಲಿ ಬುಧವಾರ ನಮ್ಮ ಆಶ್ರಮದ ಕೃಷ್ಣ ಟ್ರಸ್ಟ್ ಏರ್ಪಡಿಸಿದ್ದ ಬುದ್ಧಿಮಾಂದ್ಯ ಮಕ್ಕಳ ಪಾಲಕರಿಗೆ ಮಾರ್ಗದರ್ಶನ ಶಿಬಿರದ ಉದ್ಘಾಟಿಸಿ ಮಾತನಾಡಿದರು.
ಮಹತ್ವಪೂರ್ಣ ಸಾಮಾಜಿಕ ಕಾರ್ಯಕ್ಕೆ ಹೆಚ್ಚು ಒತ್ತುಕೊಡಲಾಗಿದ್ದು, ಶೀಘ್ರವೇ ಕಾರ್ಯರೂಪಕ್ಕೆ ತರಲಾಗುವುದು. ಇದಕ್ಕೆ ಹಣವಂತರ, ದಾನಿಗಳು ಸಹಕಾರ, ಆರ್ಥಿಕ ನೆರವು ನೀಡಲು ಮುಂದಾಗಿರುವುದು ಸೇವೆಗೆ ಇನ್ನಷ್ಟು ಶಕ್ತಿ ತುಂಬಿದಂತಾಗಿದೆ ಎಂದರು.
ಮಕ್ಕಳು ಆರೋಗ್ಯವಂತರಾಗಿ ಬೆಳೆಯಲು ಮಾನಸಿಕ ತಜ್ಞರಿಂದ ಸೂಕ್ತ ವೈದ್ಯಕೀಯ ಸೇವೆ, ಅನುಭವಿ ಶಿಕ್ಷಕಿಯರಿಂದ ವಿಶೇಷ ಶಿಕ್ಷಣದೊಟ್ಟಿಗೆ ಅವರ ಆತ್ಮಬಲ ಸುಧಾರಣೆಗೆ ಒತ್ತು ಕೊಡುವುದು ಅಗತ್ಯ ಎಂದು ಹೇಳಿದರು.
ಮಕ್ಕಳು ಆರೋಗ್ಯವಂತರಾಗಿ ಹುಟ್ಟಿದರೆ ಆ ಮನೆಯಲ್ಲಿ ಸದಾ ಸಂಭ್ರಮ ಇರುತ್ತದೆ. ಆದರೆ, ಅಂಗವೈಕಲ್ಯದಿಂದ ಮಕ್ಕಳು ಜನಿಸಿದರೆ ತಂದೆ- ತಾಯಿಗಳು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಮಧ್ಯೆಯೂ ಬಹುತೇಕರು ಕರುಳು ಕುಡಿಯನ್ನು ಪೋಷಿಸುತ್ತಾರೆ ಎಂದರು.
ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಅಭಿನವ್ ಮಾತನಾಡಿ, ಮಕ್ಕಳ ದೈಹಿಕ, ಮಾನಸಿಕ ಆರೂಗ್ಯ ಸುಧಾರಣೆ ಹಾಗೂ ಶಿಕ್ಷಣ ಮೂಲಕ ಮುಖ್ಯವಾಹಿನಿಗೆ ತರಲು ಸರ್ಕಾರ ಅನೇಕ ಸೌಲತ್ತುಗಳನ್ನು ಕಲ್ಪಿಸುತ್ತಿದೆ ಎಂದರು.