ಹನೂರು: ತಾಲೂಕಿನ ಗುಂಡಿಮಾಳದಲ್ಲಿ 16 ಹಸುಗಳ ಕಾಲುಗಳಿಗೆ ಮಚ್ಚಿನಿಂದ ಹಲ್ಲೆ ನಡೆಸಿರುವ ಟಿಬೆಟಿಯನ್ ಮೂಲದ ವ್ಯಕ್ತಿಯನ್ನು ಗಡಿಪಾರು ಮಾಡುವಂತೆ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಒತ್ತಾಯಿಸಿದ್ದು, ಶುಕ್ರವಾರ ಈ ಸಂಬಂಧ ಒಡೆಯರಪಾಳ್ಯ ಉಪಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕಳೆದ ವಾರದ ಹಿಂದೆ ಒಡೆಯರಪಾಳ್ಯದ ಟಿಬೆಟಿಯನ್ ಕ್ಯಾಂಪ್ ವಾಸಿಯಾದ ವ್ಯಕ್ತಿಯೊಬ್ಬ ಇಲ್ಲಸಲ್ಲದ ಕಾರಣಕ್ಕೆ 16 ಹಸುಗಳ ಕಾಲುಗಳಿಗೆ ಮಚ್ಚಿನಿಂದ ಹಲ್ಲೆ ನಡೆಸಿರುವುದು ಅಮಾನವೀಯ. ಇದರಿಂದ ಜಾನುವಾರುಗಳನ್ನು ನಂಬಿದ್ದ ಕುಟುಂಬ ತುಂಬ ತೊಂದರೆ ಅನುಭವಿಸುವಂತಾಗಿದೆ. ಆದರೆ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಆ ವ್ಯಕ್ತಿ ಗ್ರಾಮಕ್ಕೆ ಆಗಮಿಸಿ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾನೆ. ಇದರಿಂದ ಘರ್ಷಣೆಗೆ ಕಾರಣವಾಗುತ್ತದೆ. ಆದ್ದರಿಂದ ಪೊಲೀಸರು ಈ ಬಗ್ಗೆ ಅಗತ್ಯ ಕ್ರಮವಹಿಸಿ ಆತನನ್ನು ಗಡಿಪಾರು ಮಾಡಬೇಕು. ಜತೆಗೆ ಈ ಭಾಗದಲ್ಲಿ ರಾರಾಜಿಸುತ್ತಿರುವ ಅನ್ಯ ಭಾಷಿಯ ನಾಮ ಫಲಕವನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮಾ.25 ರಂದು ಒಡೆಯರಪಾಳ್ಯದಲ್ಲಿ ಅಂತಾರಾಜ್ಯ ವಾಹನ ಸಂಚಾರ ತಡೆದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡರಾದ ನವೀನ್, ಮಂಜು, ಶಿವರಾಜು, ಮನೋಹರ್, ಪ್ರಸಾದ್ ವೇಲುಸ್ವಾಮಿ ಹಾಗೂ ಇನ್ನಿತರರು ಇದ್ದರು.