ದೆಹಲಿ: ಅತ್ತೆಯನ್ನು ಬಾಣಲೆಯಿಂದ ಹೊಡೆದು ಕೊಂದು ನಂತರ ಆಕೆ ಬಿದ್ದು ಸತ್ತಿದ್ದಾಳೆ ಎಂದು ಕಥೆ ಕಟ್ಟಿದ್ದ 48 ವರ್ಷದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಮಹಿಳೆಯನ್ನು ದೆಹಲಿಯ ಸರೈ ಪ್ರದೇಶದಲ್ಲಿ ವಾಸಿಸುತ್ತಿದ್ದ ಹಸಿಸೋಮ್ ಎಂದು ಗುರುತಿಸಲಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಳು.
ಸುರ್ಜಿತ್ ಸೋಮ್ (51), ಅವರ ಪತ್ನಿ ಸರ್ಮಿಷ್ಟಾ ಸೋಮ್ (48) ದಂಪತಿಗಳು ಆಕೆಯನ್ನು ನೋಡಿಕೊಳ್ಳಲು ವಿಫಲರಾಗಿದ್ದರು. ಪ್ರಾರಂಭದಲ್ಲಿ ದಂಪತಿಗಳ ಮಾತನ್ನು ನಂಬಿದ್ದ ಪೊಲೀಸರು ಸುಮ್ಮನಾಗಿದ್ದರು. ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ವೈದ್ಯರು, ಆಕೆಯ ದೇಹದ ಮೇಲೆ 14 ಗಾಯಗಳಿವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಚುನಾವಣೆ 2023: ವಿದೇಶದಿಂದ ಬಂದು ಮತ ಚಲಾಯಿಸಿದ ಯುವತಿಯರು!
ಕೊನೆಗೆ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದಾಗ, ಸುರ್ಜಿತ್ ಅವರ ಮಗಳು ತನ್ನ ತಾಯಿ ಮತ್ತು ಅಜ್ಜಿಯ ನಡುವೆ ಉತ್ತಮ ಬಾಂಧವ್ಯವಿರಲಿಲ್ಲ. ಅವರ ನಡುವೆ ಮಾತಿನ ಚಕಮಕಿಯಾಗುತ್ತಿತ್ತು ಎಂದು ಹೇಳಿದ್ದಾಳೆ. ಆಗ ಪೊಲೀಸರು ಸೊಸೆಯನ್ನು ವಿಚಾರಣೆಗೊಳಪಡಿಸಿದಾಗ ಆಕೆ, ಏಪ್ರಿಲ್ 28 ರಂದು ಬೆಳಿಗ್ಗೆ 10:30 ಕ್ಕೆ ತನ್ನ ಅತ್ತೆಯ ಫ್ಲಾಟ್ಗೆ ಹೋಗಿ ಅಡುಗೆ ಮನೆಯಲ್ಲಿದ್ದ ಅತ್ತೆಯನ್ನು ತವೆಯಿಂದ ಹೊಡೆದು ಕೊಂದು ನಂತರ ಅದನ್ನು ಒರೆಸಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಕೊನೆಗೆ ಪೊಲೀಸರು ಸುರ್ಜಿತ್ನನ್ನು ವಿಚಾರಣೆಗೊಳಪಡಿಸಿದಾಗ, ತಾನು ಏನೂ ಮಾಡಿಲ್ಲ. ಕೇವಲ ಸಿಸಿಟಿವಿ ಕ್ಯಾಮೆರಾದ ಮೆಮೊರಿ ಕಾರ್ಡ್ ಅನ್ನು ತೆಗೆದಿದ್ದೇನೆಂದು ಒಪ್ಪಿಕೊಂಡಿದ್ದ. ಅನಂತರ, ಸುರ್ಜಿತ್ನಿಂದ ಪೊಲೀಸರು ಮೆಮೊರಿ ಕಾರ್ಡ್ ವಶಪಡಿಸಿಕೊಂಡು ನೋಡಿದಾಗ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿರಲಿಲ್ಲ. ಆದರೆ ಈ ಮುಂಚೆಯೇ ಸರ್ಮಿಷ್ಟಾ ಸೋಮ್ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರಿಂದ ಪ್ರಕರಣ ಬಗೆಹರಿದಿದೆ.(ಏಜೆನ್ಸೀಸ್)